ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ
ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ 39.9 ಡಿ.ಸೆ. ಮತ್ತು ಉಡುಪಿ ಜಿಲ್ಲೆಯ ಅಜೆಕಾರಿನಲ್ಲಿ 39.2 ಡಿ.ಸೆ. ಉಷ್ಣಾಂಶ ದಾಖಲಾಗಿದೆ.
ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ಸೂಚನೆ
ಬಿಸಿಲ ಬೇಗೆಯಿಂದ ತಪ್ಪಿಸಲು ದ.ಕ. ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಕೆಲವೊಂದು ಸೂಚನೆಗಳನ್ನು ಪ್ರಕಟಿಸಿದೆ. ಅದರಂತೆ ಆಯಾಸವಾದಾಗ ಮಾತ್ರವಲ್ಲ, ಆಗಾಗ ನೀರು ಕುಡಿಯುತ್ತಲೇ ಇರಬೇಕು, ನೀರಿನಂತಿರುವ ಕಲ್ಲಂಗಡಿ, ಕಿತ್ತಳೆ, ಮೂಸಂಬಿ, ದ್ರಾಕ್ಷಿ, ಅನಾನಸ್ ಹಣ್ಣುಗಳನ್ನು ಸೇವಿಸಿ ಎಂದು ತಿಳಿಸಿದೆ.
ನೀರಿನ ಅಂಶವುಳ್ಳ ಆಹಾರಗಳನ್ನು ಸೇವನೆ ಮಾಡಿ, ಮನೆಯಿಂದ ಹೊರಗಡೆ ಕಾಲಿಡುವಾಗ ತಲೆಗೆ ಕ್ಯಾಪ್ ಧರಿಸುವುದು ಒಳ್ಳೆಯದು, ಬೇಸಗೆ ಸಮಯದಲ್ಲಿ ಸಡಿಲ ಉಡುಪುಗಳನ್ನು ಧರಿಸುವುದು ಸೂಕ್ತ, ಬಿಸಿಲಿಗೆ ಬರಿಗಾಲಿನಲ್ಲಿ ನಡೆಯುವುದನ್ನು ನಿಲ್ಲಿಸಿ, ಚಪ್ಪಲಿ ಅಥವಾ ಶೂ ಧರಿಸಿ ಎಂದು ಹೇಳಲಾಗಿದೆ.
ಮಕ್ಕಳ ಆರೋಗ್ಯದ ಮೇಲೆ ಬೇಸಗೆಯ ಹವಾಮಾನ ಪರಿಣಾಮ ಬೀರದಂತೆ ಜಾಗ್ರತೆ ವಹಿಸಬೇಕು. ಮಕ್ಕಳಲ್ಲಿ ನಿರ್ಜಲೀಕರಣ ತಪ್ಪಿಸಲು ಪ್ರತೀ ದಿನ 2ರಿಂದ 3 ಲೀಟರ್ ನೀರನ್ನು ಆಯಾ ಆಯಸ್ಸಿಗೆ ಅನುಗುಣವಾಗಿ ನೀಡಬೇಕು. ಜ್ವರ, ಶೀತ, ತಲೆನೋವು, ಬೊಕ್ಕೆಗಳು ಕಾಣಿಸಿಕೊಂಡಲ್ಲಿ ನುರಿತ ವೈದ್ಯರನ್ನು ಸಂಪರ್ಕಿಸಿ ಎಂದು ತಿಳಿಸಲಾಗಿದೆ.