ಮಂಗಳೂರು: ರಾಜ್ಯದ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ, ಮೈಸೂರಿನಿಂದ ತಮ್ಮ ಯಾತ್ರೆ ಆರಂಭಿಸಿದ್ದಾರೆ. ಇದೀಗ ಮಂಗಳೂರಿನಲ್ಲಿ ರೋಡ್ಶೋ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಮೈಸೂರಿನಲ್ಲಿ ಅದ್ದೂರಿ ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳ ಸಮಾವೇಶದಲ್ಲಿ ಭಾಗಿಯಾಗಿ ಬಂದ ಪ್ರಧಾನಿ ಮೋದಿ ಅವರು ನಾರಾಯಣಗುರು ವೃತ್ತದಿಂದ ಅಲಂಕೃತ ವಿಶೇಷ ವಾಹನವನ್ನೇರಿ ರೋಡ್ ಶೋ ಆರಂಭಿಸಿದರು. ವಾಹನದಲ್ಲಿ ಕರಾವಳಿಯ ಬಿಜೆಪಿ ಅಭ್ಯರ್ಥಿಗಳಾದ ಕ್ಯಾ.ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದಾರೆ.
ಕೈಯಲ್ಲಿ ಹೊಳೆಯುವ ಕಮಲದ ಚಿಹ್ನೆ ಹಿಡಿದುಕೊಂಡಿದ್ದ ಮೋದಿ ಅವರು ಹಸನ್ಮುಖರಾಗಿ ಎಲ್ಲರತ್ತ ಕೈ ಬೀಸುತ್ತಾ ಸಾಗಿದರು. ರೋಡ್ ಶೋ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರಧಾನಿ ಮೋದಿ ಅವರ ಮೇಲೆ ನಿರಂತರ ಪುಷ್ಪ ವೃಷ್ಟಿ ಗೈದರು.
ರೋಡ್ ಶೋ ವೇಳೆ ಕರಾವಳಿಯ ವಿಶೇಷ ವಾದ್ಯಗಳು, ಯಕ್ಷಗಾನ, ಹುಲಿ ವೇಷ, ಚಂಡೆ ಮೇಳಗಳು ವೈಭವ ಹೆಚ್ಚಿಸಿದವು. ಮಕ್ಕಳು, ವೃದ್ದರು ಮತ್ತು ಮಹಿಳೆಯರು ಭಾರಿ ಸಂಖ್ಯೆಯಲ್ಲಿ ರೋಡ್ ಶೋ ಕಣ್ತುಂಬಿಸಿಕೊಂಡರು.