ಬಂಟ್ವಾಳ: ಸಂಸ್ಕೃತಿ ನಮ್ಮ ಜೀವನದ ಒಂದು ಭಾಗವಾಗಿದೆ. ಅದು ರಾಷ್ಟ್ರದ ನಿಜವಾದ ಕಲೆ. ನಾವು ಮಾತನಾಡುವ ಭಾಷೆ ಕೂಡಾ ಒಂದು ಸಂಸ್ಕೃತಿ ಎಂದು ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ದುರ್ಗಾಪ್ರಸಾದ್ ಶೆಟ್ಟಿ ಹೇಳಿದರು.
ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಲಲಿತ ಕಲಾ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಯಕ್ಷಗಾನ, ಅಂಕ ಆಯನ, ಕೋಲ ಕಂಬುಲ ಇದೆಲ್ಲವೂ ಸಂಸ್ಕೃತಿಯ ಭಾಗವಾಗಿದೆ. ಭರತನಾಟ್ಯ ಕೂಡಾ ನಮ್ಮ ನೆಲದ ಒಂದು ಸಂಸ್ಕೃತಿಯಾಗಿದೆ. ಬೀದಿನಾಟಕ, ಏಕಾಂಗ ನಾಟಕಗಳು, ಏಕಾಭಿನಯ, ಪ್ರಹಸನಗಳೂ ಕೂಡಾ ಸಂಸ್ಕೃತಿಯ ಭಾಗವೇ ಆಗಿದೆ. ವಿದ್ಯಾರ್ಥಿಗಳು ಇವುಗಳನ್ನೆಲ್ಲಾ ನೋಡಿ ಕಲಿಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದ್ದರು. ಲಲಿತ ಕಲಾ ಸಂಘದ ಅಧ್ಯಕ್ಷೆ, ಇತಿಹಾಸ ಉಪನ್ಯಾಸಕಿ ಭಾರತಿ ವಸಂತ ಕುಮಾರ್ ಅತಿಥಿ ಪರಿಚಯದೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅನನ್ಯಾ, ಶ್ವೇತಾ ಪೈ, ಭುವನಾ ಚಂದ್ರಹಾಸ, ಸಂಜನಾ ಪೈ ಪ್ರಾರ್ಥಿಸಿದರು. ಲಲಿತ ಕಲಾ ಸಂಘದ ಕಾರ್ಯದರ್ಶಿ ಸಹನಾ ಜೆ.ಪಿ. ವಂದಿಸಿದರು. ವಿದ್ಯಾರ್ಥಿನಿ ಅಫ್ರೀಮಾ ಆಯಿಷಾ ಕಾರ್ಯಕ್ರಮ ನಿರೂಪಿಸಿದರು.