Wednesday, February 4, 2026

’ವಿಶ್ವ ಕೈತೊಳೆಯುವ ದಿನ’ ಅಕ್ಟೋಬರ್-15

ಪ್ರತಿ ವರ್ಷ ಅಕ್ಟೋಬರ್ 15 ರಂದು ವಿಶ್ವ ಕೈತೊಳೆಯುವ ದಿನ ಎಂದು ಆಚರಿಸಿ ಕೈ ತೊಳೆಯದೆ ಇರುವುದರಿಂದ ಕೊಳೆಯಾದ ಕೈಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. 2008 ರಿಂದ ಈ ಆಚರಣೆ ಜಾರಿಗೆ ಬಂದಿದೆ. ಕೈತೊಳೆಯುವುದು ಎನ್ನುವುದು ಅತ್ಯಂತ ಸಹಜವಾದ ಮತ್ತು ಸಾಮಾನ್ಯವಾದ ಪ್ರಕ್ರಿಯೆಯಾದರೂ ಕೈತೊಳೆಯದೇ ಇರುವುದರಿಂದ ಹಲವಾರು ರೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಇದೀಗ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡಿ, ಜಗತ್ತಿನ ಎಲ್ಲಾ ದೇಶಗಳ ಜನರನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿರುವ ಮತ್ತು ಇಡೀ ಜಗತ್ತೇ ಹೈರಾಣಾಗಿ ಮಕಾಡೆ ಮಲಗಲು ಕಾರಣವಾದ ಕೋವಿಡ್-19 ಎಂಬ ಕೊರೋನಾ ವೈರಾಣುವಿನಿಂದ ಹರಡುವ ರೋಗವನ್ನು ಕೂಡಾ ಅತೀ ಸುಲಭವಾಗಿ ಸೋಪಿನಿಂದ ಕೈತೊಳೆಯುವುದರಿಂದ ನಾಶ ಮಾಡಬಹುದು ಎಂಬ ಕಾರಣದಿಂದಾಗಿ ಈ ವಿಶ್ವ ಕೈತೊಳೆಯುವ ದಿನಕ್ಕೆ ವಿಶೇಷ ಪ್ರಾಮುಖ್ಯತೆ ಬಂದಿದೆ. ದಿನವೊಂದಕ್ಕೆ ಕನಿಷ್ಟ 6 ರಿಂದ 10 ಬಾರಿ ಕೈತೊಳೆಯಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ.


ವಿಶ್ವ ಕೈತೊಳೆಯುವ ದಿನದ ಧ್ಯೇಯಗಳು ಏನು?
1) ಜನರಲ್ಲಿ ಕೈತೊಳೆಯುವ ಸಂಸ್ಕೃತಿ ಬೆಳೆಯಬೇಕು ಎಂಬ ಸದುದ್ದೇಶ ಈ ಆಚರಣೆ ಹೊಂದಿದೆ.
2) ನಿಯಮಿತವಾಗಿ ನಿರಂತರವಾಗಿ ದಿನದಲ್ಲಿ ೬ ರಿಂದ ೧೦ ಬಾರಿ ಕೈ ತೊಳೆಯುವುದರಿಂದ ಜನರಿಗೆ ಉಂಟಾಗುವ ಲಾಭಗಳನ್ನು ಮನವರಿಕೆ ಮಾಡುವುದು.
3) ಜನರಲ್ಲಿ ಸರಿಯಾದ ರೀತಿಯಲ್ಲಿ ಸೋಪು ಬಳಸಿ ಸೂಕ್ತ ಸಮಯದಲ್ಲಿ ಕೈತೊಳೆಯುವ ರೂಢಿಯನ್ನು ಬೆಳೆಸಬೇಕು ಎಂಬ ಅಭಿಲಾಷೆ ಹೊಂದಿದೆ.
2020ರ ವಿಶ್ವ ಕೈತೊಳೆಯುವ ದಿನದ ಧ್ಯೇಯ ವಾಕ್ಯ Hand Hygiene For All ಎಂದರೆ ಎಲ್ಲರಿಗೂ ಕೈಯ ಸ್ವಚ್ಛತೆ ಎಂಬುದಾಗಿದೆ.
ಕೈ ತೊಳೆಯುವುದರ ಲಾಭಗಳು ಏನು?
1) ನಿರಂತರವಾಗಿ ನಿಯಮಿತವಾಗಿ ಕೈ ತೊಳೆಯುವುದರಿಂದ ದೈಹಿಕ ಸ್ಪರ್ಶದ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಉದಾಹರಣೆಗೆ ಕೋವಿಡ್ ಸೋಂಕಿತ ವ್ಯಕ್ತಿಯು ತನ್ನ ಕೈ ಸ್ಪರ್ಶದ ಮುಖಾಂತರ ಇನ್ನೊಬ್ಬರಿಗೆ ರೋಗ ಹರಡುವ ಸಾಧತೆ ಇದೆ. ಹಾಗಾಗಿ ಕೋವಿಡ್ ಸೋಂಕಿತ ವ್ಯಕ್ತಿ ಹಾಗೂ ಆತನನ್ನು ಸ್ಪರ್ಶಿಸಿದ ವ್ಯಕ್ತಿ ಸೋಪಿನ ನೀರಿನಿಂದ ಕೈತೊಳೆಯುವುದರಿಂದ ವೈರಾಣು ನಾಶ ಆಗಿ ರೋಗ ಹರಡುವುದನ್ನು ತಡೆಯಬಹುದಾಗಿದೆ.
2) ಕೆಲವೊಂದು ಬ್ಯಾಕ್ಟೀರಿಯಾದಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಕಾಲರಾವನ್ನು ಸರಿಯಾಗಿ ಕೈತೊಳೆಯುವುದರಿಂದ ಹರಡದಂತೆ ತಡೆಯಬಹುದಾಗಿದೆ. ಕೈಯನ್ನು ಪದೇ ಪದೇ ತೊಳೆಯುವುದರಿಂದ ಅತಿಸಾರ, ಬೇಧಿ ಮುಂತಾದ ರೋಗಗಳನ್ನು ಪ್ರತಿ ಮೂವರಲ್ಲಿ ಒಬ್ಬರಿಗೆ ತಡೆಯಬಹುದು ಮತ್ತು ಶ್ವಾಸಕೋಶದ ಸೋಂಕನ್ನು ಪ್ರತಿ ಐವರಲ್ಲಿ ಒಬ್ಬರಿಗೆ ತಪ್ಪಿಸಬಹುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ.


ಕೈತೊಳೆಯುವುದರಲ್ಲಿ ಮೂರು ವಿಧಗಳು
1) ಸಾಮಾಜಿಕ ಸಾಮಾನ್ಯ ಕೈತೊಳೆಯುವಿಕೆ. ಇದು ಪ್ರತಿಯೊಬ್ಬರು ಮಾಡುವಂತಹ ಪ್ರಕ್ರಿಯೆ. ಸೋಪು ಮತ್ತು ನೀರಿನಿಂದ 20 ಸೆಕೆಂಡುಗಳ ಕಾಲ ಕೈತೊಳೆಯುವುದು. ಹೀಗೆ ಮಾಡುವುದರಿಂದ ಕೈಯಲ್ಲಿರುವ ಕೊಳೆ, ಕಳಚಿದ ಚರ್ಮದ ಪೊರೆ ಮತ್ತು ಇತರ ಬ್ಯಾಕ್ಟೀರಿಯಾ, ವೈರಾಣು ಮುಂತಾದ ಜೀವಿಗಳು ತೊಳೆದು ಹೋಗುತ್ತದೆ. ಇಲ್ಲಿ ಬರೀ ನೀರು ಮತ್ತು ಸೋಪಿನ ದ್ರಾವಣ ಬಳಸಲಾಗುತ್ತದೆ.
2) ಆಂಟಿಸೆಪ್ಟಿಕ್ ಅಥವಾ ಕ್ರಿಮಿನಾಶಕ ಬಳಸಿ ಕೈತೊಳೆಯುವುದು. ಇಲ್ಲಿ ಕ್ರಿಮಿನಾಶಕ ಡೆಟ್ಟಾಲ್ ಮತ್ತು ಇತರ ಕ್ರಿಮಿನಾಶಕ ದ್ರಾವಣ ಬಳಸಿ ಕೈತೊಳೆಯಲಾಗುತ್ತದೆ.
3) ಸರ್ಜಿಕಲ್ ಹಾಂಡ್ ಸ್ಕ್ರಬ್ ಅಥವಾ ವೈದ್ಯರುಗಳು ಜನರಿಗೆ ಮೊದಲು ಕೈತೊಳೆಯುವಿಕೆ. ಇದೊಂದು ವಿಶೇಷ ಕೈತೊಳೆಯುವ ಪ್ರಕ್ರಿಯೆಯಾಗಿದ್ದು, ಅಯೋಡಿನ್ ದ್ರಾವಣವನ್ನು ಹೆಚ್ಚಾಗಿ ಬಳಸುತ್ತಾರೆ. ಇದಕ್ಕೆ ಕನಿಷ್ಟ ೩ ರಿಂದ ೫ ನಿಮಿಷ ತಗಲುತ್ತದೆ ಮತ್ತು ಬ್ಯಾಕ್ಟೀರಿಯಾ ವೈರಾಣು ಮುಂತಾದ ಎಲ್ಲಾ ಜೀವಿಗಳು ಕೊಲ್ಲಲ್ಪಡುತ್ತದೆ.
ಹೇಗೆ ಕೈ ತೊಳೆಯಬೇಕು?
1) ನಿಮ್ಮ ಕೈಗಳನ್ನು ಶುದ್ಧವಾದ ಹರಿಯುವ ನಳ್ಳಿಯ ನೀರು (ಬಿಸಿ ಅಥವಾ ತಣ್ಣಗೆ) ಬಳಸಿ ಕೈ ತೊಳೆಯಬೇಕು.
2) ಕೈಗಳಿಗೆ ಸೋಪಿನ ದ್ರಾವಣ ಬಳಸಿ ಎರಡೂ ಕೈಗಳನ್ನು ಪರಸ್ಪರ ಉಜ್ಜಿಕೊಂಡು ಹೆಚ್ಚು ನೊರೆ ಬರುವಂತೆ ಮಾಡಬೇಕು
3) ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ಸರಿಯಾಗಿ ಸೋಪಿನಿಂದ ಉಜ್ಜಬೇಕು.
4) ಚೆನ್ನಾಗಿ ಕೈಗಳನ್ನು ಉಜ್ಜಿದ ಬಳಿಕ ಹರಿಯುವ ಬಳ್ಳಿಯ ನೀರಿನಿಂದ ಕೈಯನ್ನು ತೊಳೆಯಬೇಕು.
5) ಕೈಯನ್ನು ಉಜ್ಜುವಾಗ ಅಂಗೈಯ ಹಿಂಭಾಗ, ಬೆರಳುಗಳ ನಡುವೆ, ಅಂಗೈ ಮತ್ತು ಕೈ ಬೆರಳುಗಳು ಈ ಎಲ್ಲಾ ಭಾಗಗಳಿಗೂ ಸೋಪಿನ ದ್ರಾವಣ ತಗಲುವಂತೆ ಮಾಡಬೇಕು.
6) ಬರೀ ನೀರಿನಿಂದ ಕೈ ತೊಳೆಯುವುದರಿಂದ ಹೆಚ್ಚಿನ ಪ್ರಯೋಜನವಾಗಬೇಕು. ಸೋಪಿನ ದ್ರಾವಣ ಬಳಸಿ ಕೈತೊಳೆಯುವುದು ಉತ್ತಮ ಎಂದು ತಿಳಿದು ಬಂದಿದೆ.
ಯಾವ ಸಂದರ್ಭಗಳಲ್ಲಿ ಕೈ ತೊಳೆಯಬೇಕು?
ನೀವು ನಿಮ್ಮ ಮೂಗು, ಬಾಯಿಗಳನ್ನು ಸ್ಪರ್ಶಿಸಿದಾಗ ಅಥವಾ ಕೆಮ್ಮಿದಾಗ, ಆಕಳಿಸಿದಾಗ ಅಥವಾ ಸೀನಿದಾಗ ಕೀಟಾಣುಗಳು ನಿಮ್ಮ ಕೈಗಳಿಗೆ ಸೇರಿಕೊಂಡು ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ. ಅದೇ ರೀತಿ ಕೀಟಾಣುಗಳಿಂದ ಕೂಡಿದ ಆಹಾರ ಪದಾರ್ಥ, ತರಕಾರಿ ಅಥವಾ ಇನ್ನಾವುದೇ ಜೀವರಹಿತ ವಸ್ತು ಮುಟ್ಟಿದಾಗಲೂ ನಿಮ್ಮ ಕೈಗಳಿಗೆ ಕ್ರಿಮಿಗಳು ಸೇರಿಕೊಳ್ಳಬಹುದು. ಈ ಕಾರಣದಿಂದ ನೀವು ಈ ಕೆಳಗೆ ತಿಳಿಸಿದ ಸಂದರ್ಭಗಳಲ್ಲಿ ಕೈ ತೊಳೆಯಬೇಕು.
1) ಆಹಾರ ಸೇವನೆಯ ಮೊದಲು
2) ಆಹಾರ ತಯಾರಿಸುವ ಮೊದಲು, ತಯಾರಿಸುವಾಗ ಮತ್ತು ಆಹಾರ ತಯಾರಿಸಿದ ಬಳಿಕ
3) ದೇಹಬಾಧೆ ತೀರಿಸಿದ ಬಳಿಕ
4) ಯಾರಾದರೂ ಶಂಕಿತ ಅಥವಾ ಸೋಂಕಿತ ವ್ಯಕ್ತಿಯನ್ನು ಸ್ಪರ್ಶಿಸಿದ ಬಳಿಕ
5) ನೀವು ಕೆಮ್ಮಿದಾಗ, ಸೀನಿದಾಗ ಅಥವಾ ಮೂಗನ್ನು ಸ್ಪರ್ಶಿಸಿದ ಬಳಿಕ
6) ಪ್ರಾಣಿಗಳನ್ನು ಸ್ಪರ್ಶಿಸಿದ ಬಳಿಕ ಅಥವಾ ಅವುಗಳ ಮಲ ಮೂತ್ರ ಸ್ಪರ್ಶಿಸಿದ ಬಳಿಕ
7) ಮನೆಯಲ್ಲಿನ ಸಾಕುಪ್ರಾಣಿಗಳ ಆಹಾರ ಪದಾರ್ಥ ಸ್ಪರ್ಶಿಸಿದ ಬಳಿಕ
8) ಮನೆಯಲ್ಲಿನ ತ್ಯಾಜ್ಯ ವಸ್ತುಗಳನ್ನು ಸ್ಪರ್ಶಿಸಿದ ಬಳಿಕ
9) ಮಕ್ಕಳ ಡೈಪರ್ ಅಥವಾ ಮಲಮೂತ್ರವನ್ನು ಶುಚಿಗೊಳಿಸಿದ ಬಳಿಕ
10) ಕೈ ಅಥವಾ ದೇಹದ ಯಾವುದಾದರೂ ಗಾಯವನ್ನು ಸ್ಪರ್ಶಿಸುವ ಮೊದಲು
ಕೊನೆಮಾತು:
ಕೈ ತೊಳೆಯುವುದು ಎನ್ನುವ ವಿಚಾರ ಕೇಳಿದರೇ ಮೂಗು ಮುರಿಯುವ ಜನರೇ ಇದೀಗ ಜೀವ ಭಯದಿಂದ ದಿನವಿಡೀ ಕೈತೊಳೆಯುವ ಕೆಲಸ ಮಾಡುತ್ತಿರುವುದು ಸೋಜಿಗದ ಸಂಗತಿ. 2008ರಲ್ಲಿ ಮೊದಲ ಬಾರಿಗೆ ವಿಶ್ವ ಕೈತೊಳೆಯುವ ದಿನ ಆಚರಿಸಿ 120 ಮಿಲಿಯನ್ ಮಂದಿ ಮಕ್ಕಳ ಏಕಕಾಲಕ್ಕೆ 70 ದೇಶಗಳಲ್ಲಿ ಕೈತೊಳೆದಾಗ ಗೇಲಿ ಮಾಡಿದ ಜನರೇ ಇಂದು ಬಾಯಿ ಮುಚ್ಚಿಕೊಂಡು ದಿನಕ್ಕೆ ಹತ್ತಾರು ಬಾರಿ ಕೈ ತೊಳೆಯುತ್ತಿರುವುದು ವಿಪರ್‍ಯಾಸದ ಸಂಗತಿ. ಕೋವಿಡ್-19 ರೋಗ ಬಂದು ಜನರ ಜೀವನ ಶೈಲಿ ಬದಲಾಗಿದೆ ಮತ್ತು ಜನರು ಜೀವನದ ಬಗ್ಗೆ ಹೊಸ ದಿಕ್ಕಿನಿಂದ ನೋಡುವಂತೆ ಆಗಿದೆ. ಅಂದು ಕೈತೊಳೆಯಲು ಹೇಳಿದಾಗ ರೇಗುತ್ತಿದ್ದವರೇ ಇಂದು ಮುಂದೆ ನಿಂತು ಕೈ ತೊಳೆಯುವುದರ ಜೊತೆಗೆ ಇತರರಿಗೂ ಮಾದರಿಯಾಗಿ ಬದುಕುತ್ತಿದ್ದಾರೆ. ಒಟ್ಟಿನಲ್ಲಿ ಕೊರೋನಾ ವೈರಾಣುವಿನಿಂದ ಜಗತ್ತನ್ನೇ ಕಾಡಿದ ಕೋವಿಡ್-19 ರೋಗದಿಂದ ಜನರ ಜೀವನದ ಸಂಸ್ಕೃತಿ ಮತ್ತು ಸಂಸ್ಕಾರಗಳೇ ಬದಲಾಗಿರುವುದು ಸಂತಸದ ವಿಚಾರ. ಇದರ ಜೊತೆಗೇ ಜೀವನದ ಕ್ರಮ, ಆಹಾರ ಪದ್ಧತಿ ಮತ್ತು ಬದುಕುವ ರೀತಿ ಕೂಡಾ ಬದಲಾಗಿರುವುದು ಧನಾತ್ಮಕ ಬೆಳವಣಿಗೆ. ಅದೇನೇ ಇರಲಿ ನಾವು ನಮ್ಮ ಕೈಯನ್ನು ಸ್ವಚ್ಛವಾಗಿಸುವುದರ ಜೊತೆಗೆ ಬಾಯಿ, ದೇಹ ಮತ್ತು ಮನಸ್ಸನ್ನು ಕೂಡಾ ನಿರಂತರವಾಗಿ ಸ್ವಚ್ಛಗೊಳಿಸುತ್ತಾ ಇದ್ದಲ್ಲಿ ಖಂಡಿತವಾಗಿಯೂ ಸುಂದರ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ.

✍️ ಬರಹ: ಡಾ|| ಮುರಲೀ ಮೋಹನ್ ಚೂಂತಾರು

More from the blog

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...