Monday, February 10, 2025

ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ನಲ್ಲೂ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ ಗೇಟ್ ಹಾಕಿ ನೀರು ಸಂಗ್ರಹ ಆರಂಭಗೊಂಡಿದೆ.

ಸಣ್ಣ ನೀರಾವರಿ ಇಲಾಖೆಯ ಮೂಲಕ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ಕಂ ಬ್ಯಾರೇಜ್ ಇದಾಗಿದ್ದು, ಮೂರು ವರ್ಷ ಹಿಂದೆ ಹರೇಕಳದಲ್ಲಿ ನೀರು ಸಂಗ್ರಹ ಕಾರ್ಯ ಆರಂಭಗೊಂಡಿತ್ತು. ಬಿಳಿಯೂರಿನಲ್ಲಿ ಕಳೆದ ವರ್ಷ ನೀರು ಸಂಗ್ರಹ ಆರಂಭಗೊಂಡಿದ್ದು, ಈ ವರ್ಷವೂ ಗೇಟ್ ಅಳವಡಿಸಲಾಗಿದೆ.

ಇದೀಗ ಈ ವರ್ಷದಿಂದ ಜಕ್ರಿಬೆಟ್ಟಿನ 3ನೇ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲೂ ನೀರು ಸಂಗ್ರಹ ಆರಂಭಗೊಂಡಿದೆ. 2022ರ ನವೆಂಬರ್‌ನಲ್ಲಿ ಅಂದಿನ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ ಆರಂಭಗೊಂಡಿತ್ತು. ಕಳೆದ ವರ್ಷವೇ ಇದರ ನಿರ್ಮಾಣದ ಕಾಮಗಾರಿ ಪೂರ್ಣಗೊಂಡು ಪ್ರಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಪ್ರಸ್ತುತ ನದಿ ದಡಕ್ಕೆ ಕಲ್ಲು ಹಾಸುವ ಕೆಲಸ ಪೂರ್ಣಗೊಂಡು ಗೇಟ್ ಹಾಕಿ ನೀರು ನಿಲ್ಲಿಸುವಿಕೆ ಆರಂಭಗೊಂಡಿದೆ.

ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಉದ್ದ 351.25 ಮೀ. ಹಾಗೂ 5.50 ಮೀ. ಎತ್ತರವಿದ್ದು, ಪೂರ್ತಿ ಗೇಟ್ ಅಳವಡಿಸಿದರೆ 166 ಎಂಸಿಎಫ್‌ಟಿ ನೀರು ಶೇಖರಣೆಗೊಂಡು ಸುಮಾರು 5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸಲಿದೆ. ಸೇತುವೆಯ ಅಗಲ 7.50 ಮೀ. ಇದ್ದು, ಒಟ್ಟು 21 ಕಿಂಡಿಗಳಿವೆ. 12 ಮೀ. ಅಗಲದ ವರ್ಟಿಕಲ್ ಲಿಫ್ಟ್ ಗೇಟ್‌ಗಳಿದ್ದು, ಮಧ್ಯದಲ್ಲಿ ಎರಡು ಸ್ಕರ‍್ಸ್ ಸ್ಲೂಯಿಸ್ ಗೇಟ್‌ಗಳಿರುತ್ತವೆ. ತುರ್ತು ಪ್ರವಾಹದ ಸಂದರ್ಭ ನೀರಿನ್ನು ಕೆಳಕ್ಕೆ ಕಳುಹಿಸುವ ಉದ್ದೇಶದಿಂದ ಸ್ಕರ‍್ಸ್ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಇದು ಲಿಫ್ಟ್ ಗೇಟ್‌ಗಳಿಗಿಂತ ತೀರಾ ಕೆಳಸ್ತರದಲ್ಲಿರುತ್ತದೆ.

ಹೀಗಾಗಿ ತಳ ಭಾಗದಲ್ಲಿ ಮರಳು ಸಂಗ್ರಹಗೊಂಡರೆ ಅದನ್ನು ಹೊರಕ್ಕೆ ಕಳುಹಿಸಲು ಅನುಕೂಲವಾಗುವ ದೃಷ್ಟಿಯಿಂದ ಈ ಗೇಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಕಳೆದ ವರ್ಷ ತುಂಬೆ ಡ್ಯಾಮ್‌ನಲ್ಲಿ ನೀರಿನ ಸಂಗ್ರಹ ಕಡಿಮೆಯಾದಾಗ ಶಂಭೂರು ಎಎಂಆರ್ ಡ್ಯಾಮ್‌ನ ಜತೆಗೆ 2 ಬಾರಿ ಬಿಳಿಯೂರು ಕಿಂಡಿ ಅಣೆಕಟ್ಟಿನಿಂದಲೂ ಗೇಟ್ ತೆರೆದು ಕೆಳಕ್ಕೆ ನೀರು ಹರಿಸಲಾಗಿತ್ತು. ಈ ವರ್ಷ ಎಎಂಆರ್ ಡ್ಯಾಮ್ ಮತ್ತು ತುಂಬೆ ಡ್ಯಾಮ್‌ನ ಮಧ್ಯೆ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿರುವುದರಿಂದ ಮಳೆ ಎಷ್ಟೇ ವಿಳಂಬವಾದರೂ ಆತಂಕ ಪಡಬೇಕಾಗಿರುವುದಿಲ್ಲ.

ಮಂಗಳೂರು ನಗರದ ಜತೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಲ್ಲಿ ಸಂಗ್ರಹಿಸಲ್ಪಟ್ಟ ನೀರು ಸಹಕಾರಿಯಾಗಲಿದ್ದು, ಜತೆಗೆ ನದಿ ಕಿನಾರೆಯ ಕೃಷಿ ತೋಟಗಳಿಗೆ ಅನುಕೂಲವಾಗುವ ಜತೆಗೆ ಸುತ್ತಮುತ್ತಲ ಪ್ರದೇಶದ ಅಂತರ್ಜಲ ವೃದ್ಧಿಗೂ ನೆರವಾಗಲಿದೆ.

More from the blog

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು...

ಕೊಳ್ನಾಡು : ಬಾರೆಬೆಟ್ಟು ಮಂಟಮೆಯಲ್ಲಿ ಕಾಲಾವಧಿ ಜಾತ್ರೆ

ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ 'ಬಾರೆಬೆಟ್ಟು ಮಂಟಮೆ'ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು. ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ...

ಪಣೋಲಿಬೈಲು ಕ್ಷೇತ್ರದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ & ಕೋಲ ಸೇವೆ ಇಲ್ಲ

ಬಂಟ್ವಾಳ: ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ ಮತ್ತು ಕೋಲ ಸೇವೆ” ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ನಂದಾವರ ಶ್ರೀ ವಿನಾಯಕ ಶಂಕರ...

ಬೆಳ್ತಂಗಡಿ : ಗ್ರಾಮ ಆಡಳಿತಾಧಿಕಾರಿಗಳಿಂದ 2 ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಮೇರೆಗೆ ಫೆ. 10 ರಿಂದ ಬೆಳ್ತಂಗಡಿಯಲ್ಲಿ...