Thursday, January 29, 2026

ವಿಟ್ಲ: ಕುಂಭದ್ರೋಣ ಮಳೆಗೆ ರಸ್ತೆ,ಸೇತುವೆ, ಕೃಷಿತೋಟಗಳು ಜಲಾವೃತ: ಜನಜೀವನ ಅಸ್ತವ್ಯಸ್ತ

 

ವಿಟ್ಲ: ಸೋಮವಾರದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ವಿಟ್ಲ ವ್ಯಾಪ್ತಿಯ ಹಲವಾರು ಭಾಗಗಳಲ್ಲಿ ರಸ್ತೆ, ಕೃಷಿ ತೋಟಗಳು ಜಲಾವೃತಗೊಂಡಿದ್ದು, ಕೆಲವು ಕಡೆ ಮನೆಗಳ ಸಮೀಪವೇ ನೀರು ತುಂಬಿಕೊಂಡಿದ್ದು, ಆತಂಕ ಸೃಷ್ಟಿ ಮಾಡಿದೆ. ಹಲವಾರು ಕಿಂಡಿಅಣೆಕಟ್ಟು ಮುಳುಗಡೆಯಾಗಿವೆ. ರಸ್ತೆಗೆ ನೆರೆ ನೀರು ನುಗ್ಗಿದ್ದರಿಂದ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇನ್ನೂ ಕೆಲವೆಡೆ ಗುಡ್ಡ, ಧರೆ ರಸ್ತೆಗೆ ಕುಸಿದು ಬಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.


ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಸುರಂಬಡ್ಕ ಕಿಂಡಿ ಅಣೆಕಟ್ಟು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದ ಸಾರ್ವಜನಿಕರು ಮುಂದಕ್ಕೆ ಹೋಗದೇ ಹೊಳೆಯ ಬದಿಯ ಮನೆಗಳಲ್ಲಿ ಹಾಗೂ ಹೊಳೆಯ ಬದಿಭಾಗದಲ್ಲಿಯೇ ನಿಲ್ಲುವಂತಾಗಿದೆ.
ಈ ಮಧ್ಯೆ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ಬಗ್ಗೆ ಮುನ್ಸೂಚನೆ ತಿಳಿಯದ ಹಲವು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಮನೆಯ ಅಂಗಳಕ್ಕೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ. ಮರದ ದಿಮ್ಮಿ ಹಾಗೂ ಇನ್ನಿತರ ವಸ್ತುಗಳು ಸೇತುವೆಯಲ್ಲಿ ಸಿಲುಕಿ ಹಾಕಲ್ಪಟ್ಟ ಕಾರಣ ಕಿಂಡಿ ಅಣೆಕಟ್ಟೆಯ ಬದಿಯ ರಾಡ್ ಮುರಿತಕ್ಕೊಳಗಾಗಿದೆ. ಇದು ಅಪಾಯವನ್ನು ಆಹ್ವಾನಿಸುತ್ತಿದೆ. ಅಣೆಕಟ್ಟೆ ಮೇಲೆ ಬಾಕಿಯಾಗಿರುವ ಮರದ ತುಂಡು, ಕಸಗಳನ್ನು ಒಕ್ಕೆತ್ತೂರು ಹಾಗೂ ಮಂಗಳಪದವು ಯುವಕರು ತೆರವುಗೊಳಿಸಿದರು. ಐದು ವರ್ಷಗಳ ಹಿಂದೆ ಒಂದು ಕೋಟಿ ಅನುದಾನದಲ್ಲಿ ಈ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ, ಎಂಜಿನಿಯರ್ ಶ್ರೀಧರ್, ಒಕ್ಕೆತ್ತೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಚ್ ಮಹಮ್ಮದ್ ಹಾರೀಸ್, ವಿಟ್ಲ ಗ್ರಾಮ ಕರಣಿಕ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೊಳ್ನಾಡು ಗ್ರಾಮದ ಕುಡ್ತಮುಗೇರು ಹೊಳೆ ತುಂಬಿ ಹರಿದ ಪರಿಣಾಮ ವಿಟ್ಲ-ಸಾಲೆತ್ತೂರು ರಸ್ತೆಯ ಕುಡ್ತಮುಗೇರು ರಸ್ತೆ ಜಲಾವೃತಗೊಂಡಿದೆ. ಇದರಿಂದ ಸುಮಾರು ತಾಸುಗಳವರೆಗೆ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಭಾಗ ತಗ್ಗು ಪ್ರದೇಶವಾಗಿದ್ದರಿಂದ ಪ್ರತಿವರ್ಷವೂ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಕೊಳ್ನಾಡು ಗ್ರಾಮದ ಕರೈ-ಕಾಡುಮಠದಲ್ಲಿ ರಸ್ತೆಗೆ ಗುಡ್ಡ ಕುಸಿದು ಬಿದ್ದ ಕಾರಣ ರಸ್ತೆ ಸಂಚಾರ ಬಂದ್ ಆಗಿತ್ತು. ಸ್ಥಳೀಯ ಎಸ್‌ಡಿಪಿಐ ಕಾರ್ಯಕರ್ತರು, ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ. ಕುಡ್ತಮುಗೇರು-ಕುಳಾಲು ರಸ್ತೆಯ ಕುದ್ರಿಯಾ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಬಿದ್ದಿದೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಸ್ಥಳಕ್ಕೆ ಆಗಮಿಸಿ ತಕ್ಷಣವೇ ಕಾರ್ಯಾಚರಣೆಗೆ ಇಲಾಖೆಗೆ ಸೂಚಿಸಿದ್ದಾರೆ. ಅದೇ ರೀತಿ ಪೆರ್ಲದಬೈಲು ಎಂಬಲ್ಲಿ ಗುಡ್ಡ ಕುಸಿದು ವಿದ್ಯುತ್ ಕಂಬಗಳು ವಾಲಿದ ಕಾರಣ ಅಪಾಯ ಆಹ್ವಾನಿಸುತ್ತಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಸ್ಯರಾದ ಪವಿತ್ರ ಪೂಂಜ, ಜಗದೀಶ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿಟ್ಲ-ಮಂಗಳೂರು ಪ್ರಧಾನ ರಸ್ತೆಯ ಬೊಬ್ಬೆಕೇರಿ ಎಂಬಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸದ ಕಾರಣ ರಸ್ತೆಯ ಮೇಲೆ ಮಳೆ ನೀರ ಪ್ರವಾಹ ಏರ್ಪಟ್ಟಿತ್ತು. ವಿಟ್ಲ ವ್ಯಾಪ್ತಿಯ ಕೆಲ ಮನೆಗಳ ಅಂಗಳ ಹಾಗೂ ಸಿಟೌಟ್‌ಗಳು ಜಲಾವೃತಗೊಂಡಿವೆ

More from the blog

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...

Bantwal : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ – ಪದಾಧಿಕಾರಿಗಳ ಪದಾಪ್ರಧಾನ, ರಜತ ಸಂಭ್ರಮ ಸಮಾರೋಪ

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ...

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...