ವಿಟ್ಲ: ಗ್ರಾಮಸ್ಥರ ಬೇಡಿಕೆ, ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಅಧಿಕಾರವಿಲ್ಲದ ಇಲಾಖಾಧಿಕಾರಿಗಳು ಗ್ರಾಮಸಭೆಗೆ ಬಂದು ಯಾವುದೇ ಪ್ರಯೋಜನವಿಲ್ಲ. ಹಿಂದಿನ ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಯಾವುದೇ ಸ್ಪಂದನೆ ಇರದಿದ್ದರೆ ನಿರ್ಣಯಕೈಗೊಳ್ಳುವ ಅವಶ್ಯಕತೆಯಿದೆಯೇ…ಪುಣಚ ಗ್ರಾಮಸಭೆಯಲ್ಲಿ ಚರ್ಚಿತವಾದ ಕೆಲವು ವಿಚಾರಗಳು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮ ಅಭಿವೃದ್ಧಿ ಪೂರಕವಾದ ಹಾಗೂ ವಾರ್ಡುಗಳ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು. ಪಂಚಾಯಿತಿಯ ವಾಣಿಜ್ಯ ಕಟ್ಟಡಗಳ ತೆರಿಗೆ, ನವೀಕರಣದ ಬಗ್ಗೆ ಪರಿಶೀಲನೆ ನಡೆದಿದೆಯೇ.. ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡುವ ಸಮವಸ್ತ್ರಗಳ ಅಳತೆ ಸರಿಯಾಗಿಲ್ಲ.. ಎಂದು ವೆಂಕಟ್ರಮಣ ಆಜೇರು ತಿಳಿಸಿದರು.
ಕಂದಾಯ ಇಲಾಖೆಯ ಮೂಲಕ ನಡೆಯುವ ಬೆಳೆ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ. ದೀರ್ಘಾವಧಿ ಬೆಳೆಗಳ ಸಮೀಕ್ಷೆ ಅಗತ್ಯವಿಲ್ಲ, ಅಂಗನವಾಡಿಗಳ ನೀರಿನ ಸಮಸ್ಯೆ ನಿವಾರಿಸಲು ಸಂಪು ನಿರ್ಮಿಸಬೇಕೆಂದು ಕೃಷ್ಣ ಪ್ರಸಾದ್ ಸಲಹೆ ನೀಡಿದರು.
ಸರಕಾರಿ ಶಾಲೆಗಳಲ್ಲಿ ತುಳುಪಠ್ಯ ಬೋಧನೆಗೆ ಉತ್ತೇಜನ ನೀಡಬೇಕು ಎಂದು ವಿಶ್ವನಾಥ ರೈ ಕೋಡಂದೂರು ತಿಳಿಸಿದರು. ತೊಂಡನಡ್ಕ ಎಂಬಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಬೇಕೆಂದು ರೇಣುಕಾ ಒತ್ತಾಯಿಸಿದರು.
ಉದ್ಯೋಗ ಖಾತರಿ ಯೋಜನೆ ಹಣ ಸರಕಾರ ಆಯಾಯಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತದೆ ಎಂದು ಪಿಡಿಒ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಗ್ರಾಮದ ಕೊಲ್ಲಪದವು ಎಂಬಲ್ಲಿ ಕಿಡಿಗೇಡಿಗಳು ಸರಕಾರಿ ಕೊಳವೆ ಬಾವಿಗೆ ಕಲ್ಲು ಹಾಕಿರುವುದನ್ನು, ಸೋಲಾರ್ ದೀಪಗಳನ್ನು ಕಳವು ಮಾಡಿರುವ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಲಾಯಿತು.
ಬಂಟ್ವಾಳ ಯುವ ಸಬಲೀಕರಣ ಮತ್ತೂ ಕ್ರೀಡಾಧಿಕಾರಿ ನವೀನ್ ಪಿ.ಎಸ್. ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದರು. ತಾಲೂಕಿನ ನಾನಾ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.
ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಸದಸ್ಯರಾದ ಲಲಿತ, ಉದಯಕುಮಾರ್ ದಂಬೆ, ನಾರಾಯಣ ನಾಯ್ಕ, ಭವಾನಿ ಎನ್, ಪುಷ್ಪಾವತಿ, ಶಿವಪ್ರಸಾದ್, ನಳಿನಾಕ್ಷಿ, ಜಯಂತ ಗೌಡ, ಜಯರಾಮ ನಾಯ್ಕ, ಗಂಗಯ್ಯ ಗೌಡ, ಜಯಲಕ್ಷ್ಮಿ ಭಟ್, ಮೋಹಿನಿ, ಸಂಜೀವ ಮಡಿವಾಳ, ಆನಂದ ನಾಯ್ಕ, ಪಿಡಿಒ ಲಾವಣ್ಯ ಉಪಸ್ಥಿತರಿದ್ದರು.

ಗ್ರಾ.ಪಂ. ಸದಸ್ಯರಾದ ಬಾಲಕೃಷ್ಣ ಹೆಚ್. ವಂದಿಸಿದರು.