ವಿಟ್ಲ: ಬೆಂಗಳೂರಿನ ರಾಜ್ಯ ರೈತ ಸಂಘ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ರೈತರ ಸಭೆಯಲ್ಲಿ ದ.ಕ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬೈಲುಗುತ್ತು ಶ್ರೀಧರ ಶೆಟ್ಟಿ, ಕಾರ್ಯದರ್ಶಿ ಮನೋಹರ ಶೆಟ್ಟಿ ಮತ್ತು ಜನಾಬ್ ಯೂಸೂಫ್ ಭಾಗವಹಿಸಿ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸಮಿತಿಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ನೆರೆ ಪರಿಹಾರ ನೀಡಲು ವಿಫಲವಾದ ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿ ಮುಂದೆ ಅ.31 ರಂದು ಪ್ರತಿಭಟನೆ ನಡೆಸಲು, ನ.4 ರಂದು 16 ರಾಷ್ಟ್ರಗಳ ನಡುವೆ ನಡೆಯುವ ಮುಕ್ತ ವ್ಯಾಪಾರ ಒಪ್ಪಂದದಿಂದ ಕೃಷಿ ವಲಯಕ್ಕೆ ಭಾರಿ ಹೊಡೆತ ಬೀಳುವುದರಿಂದ ಕೃಷಿ ವಲಯವನ್ನು ಈ ಒಪ್ಪಂದದಿಂದ ಹೊರಗಿಡಲು ಆಗ್ರಹಿಸುವ ಬಗ್ಗೆ, ರಾಜ್ಯದ ರೈತರಿಗೆ ಬೆಳೆನಾಶ, ಮನೆನಾಶದ ವಿಷಯದಲ್ಲಿ ಪರಿಹಾರ ನೀಡುವ ಬಗ್ಗೆ, ಮಾತು ತಪ್ಪಿದ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಗೆ ನ.7 ರಂದು ಸಹಸ್ರಾರು ಸಂಖ್ಯೆಯಲ್ಲಿ ರೈತರ ಮುತ್ತಿಗೆ ಹಾಕುವ ನಿರ್ಣಯವನ್ನು ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು.


