ವಿಟ್ಲ: ಸಮಾಜದ ಎಲ್ಲಾ ವರ್ಗದ ಜನರಿಂದ ಗೌರವಿಸಲ್ಪಡುವುದು ಸರಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ಸರಕಾರಿ ಆಸ್ಪತ್ರೆ ಹಾಗೂ ಪೊಲೀಸ್ ಇಲಾಖೆಯ ನಡುವಿನ ಸಂಬಂಧ ಅವಿನಾಭಾವವಾಗಿದ್ದು, ಯಾವುದೇ ಪ್ರಕರಣವಾದರೂ ವೈದ್ಯರ ಸಲಹೆಗಳು ಅತ್ಯಗತ್ಯವಾಗಿದೆ. ಬಡವ ಶ್ರೀಮಂತ ಎಂಬ ಭೇದಭಾವ ಮಾಡದೇ ವಿಟ್ಲ ಸಮುದಾಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಪ್ರತಿಯೊಬ್ಬರಿಗೂ ಉತ್ತಮ ಸೇವೆ ನೀಡಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯ ಎಸ್ಐ ಯಲ್ಲಪ್ಪ ಹೇಳಿದರು.
ಅವರು ಭಾನುವಾರ ವಿಟ್ಲ ಲಯನ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಉನ್ನತ ವ್ಯಾಸಂಗಕ್ಕಾಗಿ ತೆರಳುತ್ತಿರುವ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಪ್ರಶಾಂತ ಬಿ. ಎನ್. ಅವರ ಬೀಳ್ಕೊಡುಗೆ ಸಮಾರಂಭ ಮತ್ತು ಸಾರ್ವಜನಿಕ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಎಸ್ಬಿ ಸಮಾಜದ ಅಧ್ಯಕ್ಷ ರಾಧಾಕೃಷ್ಣ ಪೈ ಮಾತನಾಡಿ ಬಾಲ್ಯದಿಂದಲೇ ಸ್ನೇಹಿತರಾಗಿರುವ ಡಾ. ಪ್ರಶಾಂತರು ಸರಕಾರಿ ವ್ಯವಸ್ಥೆಯಲ್ಲಿ ಸಮರ್ಥವಾಗಿ ಕಾರ್ಯಗಳನ್ನು ನಿರ್ವಹಣೆ ಮಾಡಿದ್ದಾರೆ. ಅವರು ಉನ್ನತ ಶಿಕ್ಷಣದ ಬಳಿಕವೂ ವಿಟ್ಲದಲ್ಲಿ ಸೇವೆ ನೀಡಬೇಕು ಎಂಬುದು ಎಲ್ಲರ ಅಭಿಪ್ರಾಯ ಎಂದು ತಿಳಿಸಿದರು.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರಶಾಂತ ಬಿ. ಎನ್. ಹಾಗೂ ಅಶ್ವಿನಿ ಪ್ರಶಾಂತ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ವಿಟ್ಲ ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಪಿ. ಜಯರಾಮ ರೈ, ಲಯನ್ಸ್ ಜಿಲ್ಲಾ ಉಪ ಗವರ್ನರ್ ಡಾ. ಗೀತಾಪ್ರಕಾಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ ಕುಮಾರ್ ಭಾಗವಹಿಸಿದರು.
ಸತೀಶ್ ಕುಮಾರ್ ಆಳ್ವ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಣ್ಣಪ್ಪ ಸಾಸ್ತಾನ ವಂದಿಸಿದರು. ಮಹಮ್ಮದ್ ಇಕ್ಬಾಲ್ ಅಭಿನಂದನಾ ಪತ್ರ ವಾಚಿಸಿದರು. ವಕೀಲ ಗಿರೀಶ್ ಮುಳಿಯಾಲ ಕಾರ್ಯಕ್ರಮ ನಿರೂಪಿಸಿದರು.


