ವಿಟ್ಲ: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪರಿಸರದಲ್ಲಿ ಜೈನ ಧರ್ಮದವರು ಪುರಾತನ ಕಾಲದಲ್ಲಿ ನಿರ್ಮಿಸಿದ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯು ಪಂಚಕಲ್ಯಾಣ ಮಹೋತ್ಸವ ಆರಂಭಗೊಂಡಿತು.

ಫೆ. 13 ರಿಂದ ಫೆ. 17 ರವರೆಗೆ ಜೈನಬಸದಿಯಲ್ಲಿ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭಗವಾನ್ ಶ್ರೀ ೧೦೦೮ ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ, ಹಾಗೂ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಹಾಗೂ ಯಕ್ಷಿ ಶ್ರೀ ಜ್ವಾಲಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಫೆ. 13ರಂದು ಬೆಳಗ್ಗೆ ಇಂದ್ರ ಪ್ರತಿಷ್ಠೆ, ತೋರಣ ಮುಹೂರ್ತ, ವಿಮಾನ ಶುದ್ದಿ, ಮಧ್ಯಾಹ್ನ ನಾಂದಿ ಮಂಗಲ ಪೂಜೆ, ಅಂಕುರಾರ್ಪಣೆ ವಾಸ್ತುಪೂಜೆ, ನವಗ್ರಹ ಶಾಂತಿಪೂಜೆ,ದಿಕ್ಪಾಲಕ ಬಲಿ,ಮತ್ತಿಕಾ ಸಂಗ್ರಹಣೆ ಜರಗಿತು. ಸಂಜೆ ಅಗ್ರೋದಕ ಮೆರವಣಿಗೆ ಪಂಚ ಕಲ್ಯಾಣ ಮಂಟಪ ಪ್ರವೇಶ, ಕ್ಷೇತ್ರಪಾಲ ಪ್ರತಿಷ್ಠೆ, ಅಭಿಷೇಕ ಪೂಜೆ ಮಹಾಮಂಗಳಾರತಿ ಜರಗಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ ಆದರ್ಶಗಳನ್ನು ಪಾಲಿಸಿಕೊಂಡು ಬರುವುದೇ ನಿಜವಾದ ಧರ್ಮ. ಆಸೆ, ದುರಾಸೆಗಳಿಗೆ ಬಲಿಯಾಗದಿರಿ ಎಂಬುದೇ ಜೈನ ಧರ್ಮ ಸಿದ್ಧಾಂತ. ಸಹನೆ, ಸಂಯಮದಿಂದ ಮಾತ್ರ ಸಂಪ್ರೀತ ಬದುಕು ನಡೆಸಲು ಸಾಧ್ಯ. ನಿಜ ಅರ್ಥದ ಕೃತಿಯ ಮೂಲಕ ವಿಟ್ಲದ ಜೈನ ಬಸದಿ ನಿರ್ಮಾಣಗೊಂಡಿದೆ. ದಾನ ಮಾಡುವುದರಿಂದ ಸಿಗುವ ಪುಣ್ಯ ಬೇರೆ ಎಲ್ಲಿಯೂ ಸಿಗದು. ಆಧುನಿಕ ಶೈಲಿಯಲ್ಲಿ ಬೆಸುಗೆಯೊಂದಿಗೆ ರೂಪುಗೊಂಡಿರುವ ಜಿನಾಲಯದ ಸುತ್ತ ಜೀವನದ ತತ್ವ, ಸಿದ್ಧಾಂತಗಳನ್ನು ಜಿನ ಮಂದಿರದ ಸುತ್ತ ಕೆತ್ತಲಾಗಿದೆ. ಶ್ರಾವಕರು ಶ್ರೇಷ್ಠ ತತ್ವದಿಂದ ನಡೆಯಬೇಕು. ವಿಟ್ಲದಲ್ಲಿ ಜಿನ ಮಂದಿರ ಲೋಕಾರ್ಪಣೆ ಮೂಲಕ ಸರ್ವ ಧರ್ಮ ಸಂಗಮವಾಗಿದೆ ಎಂದು ತಿಳಿಸಿದರು.
ಕಾರ್ಕಳ ಜೈನ ಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ ಜಿನಾಲಯಗಳ ಸಂದರ್ಶನ ಪುಣ್ಯದ ಕಾರ್ಯ. ಜಿನ ದೇವರ ದರ್ಶನ ನಿರಂತರ ನಡೆಯಬೇಕು. ವಿಟ್ಲದಲ್ಲಿ ಶಾಸನ ದೇವರುಗಳು ಜಿನ ಮಂದಿರ ಜೀರ್ಣೋದ್ಧಾರದ ಮೂಲಕ ಸಂತುಷ್ಟರಾಗಿದ್ದಾರೆ ಎಂದರು.
ಮೂಡುಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ ದೈವೀ ಸಂಪತ್ತು ಮಾತ್ರ ನಮ್ಮ ಜೊತೆಗೆ ಬರುತ್ತದೆ.
ಅಹಿಂಸೆಯ ಕೇಂದ್ರ, ಆತ್ಮ ಧರ್ಮ ರಾಷ್ಟ್ರ ಧರ್ಮದ ಕಲ್ಪನೆ ಪ್ರತಿಯೊಬ್ಬರಲ್ಲೂ ಇರಬೇಕು. ಜಿಲ್ಲೆಯಲ್ಲಿ ಪ್ರತೀ ಇಪ್ಪತ್ತು ಕಿ.ಮೀ ಅಂತರದಲ್ಲಿ ಜೈನ ಮಂದಿರಗಳಿವೆ. ಜೈನ ಸಿದ್ಧಾಂತ ಜಿಲ್ಲೆಯಲ್ಲಿ ನೈಜವಾಗಿ ಅನುಷ್ಠಾನಗೊಂಡಿದೆ ಎಂದರು.
ಮೊದಲ ದಿನದ ಸಭಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ್ ಅಜಿಲ ಉದ್ಘಾಟಿಸಿ, ಸುಂದರ ಕಲಾತ್ಮಕ ಜಿನಾಲಯ ಮೂಡಿ ಬಂದಿದೆ. ವಿಟ್ಲ ಅರಸರು ಸರ್ವ ಧರ್ಮ ಸಹಿಷ್ಣುತೆಯುಳ್ಳವರಾಗಿದ್ದಾರೆ. ಯುವಶಕ್ತಿಯ ಕೂಡುವಿಕೆಯಿಂದ ಸಾರ್ಥಕ ಕಾರ್ಯ ನಡೆದಿದೆ ಎಂದರು.
ವಿಟ್ಲ ಅರಮನೆಯ ಬಂಗಾರ ಅರಸರು, ಸುರೇಂದ್ರ ಕುಮಾರ್ ಧರ್ಮಸ್ಥಳ, ಮಾಜಿ ಸಚಿವ ಅಭಯಚಂದ್ರ ಜೈನ್, ಅನಿತಾ ಸುರೇಶ್ ಕುಮಾರ್, ವಿಟ್ಲ ಚಂದ್ರನಾಥ ಬಸದಿ ಅನುವಂಶಿಕ ಆಡಳಿತ ಮೊಕ್ತೇಸರ ವಿನಯ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಾಸ್ತುಶಿಲ್ಪಿ ಸುದರ್ಶನ ಇಂದ್ರ, ಇಂಜಿನಿಯರ್ ಪಾರ್ಶ್ವನಾಥ ಜೈನ್, ಕುಂದಶಿಲ್ಪಿ ನರಸಿಂಹಾಚಾರ್, ಶಿವಪ್ರಸಾದ್ ಗೋವರ್ಧನ ಮೆಟಲ್ಸ್, ವಿಗ್ರಹ ಶಿಲ್ಪಿ ವಿ.ಕೆ.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಪಂಚ ಕಲ್ಯಾಣ ಸ್ವಾಗತ ಸಮಿತಿ ಅಧ್ಯಕ್ಷ ಜಿತೇಶ್ ಜೈನ್ ಎಂ ಸ್ವಾಗತಿಸಿದರು. ಕಾರ್ಯದರ್ಶಿ ದರ್ಶನ್ ಜೈನ್ ವಂದಿಸಿದರು. ಸಮಿತಿಯ ಶ್ರೀಮಂದಾರ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.