ವಿಟ್ಲ: ಯಾವುದೇ ಮುನ್ಸೂಚನೆ ನೀಡದೇ ದಿನಪೂರ್ತಿ ವಿದ್ಯುತ್ ಸ್ಥಗಿತಗೊಳಿಸಿದ ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ ಘಟನೆ ಸಂಭವಿಸಿದೆ.
ಪ್ರತಿ ಬುಧವಾರ ವಿಟ್ಲ ಭಾಗದಲ್ಲಿ ಟ್ರೀ ಕಟ್ಟಿಂಗ್ ಹಿನ್ನೆಲೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ ವರೆಗೆ ಹಾಗೂ ಸಂಜೆವರೆಗೂ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿದೆ. ಆದರೆ ಬುಧವಾರ ಬೆಳಗ್ಗೆ ಏಳು ಗಂಟೆಗೆ ಕೆಪಿಟಿಸಿಎಲ್ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದರು. ಸಂಜೆ ಐದು ಗಂಟೆಯಾದರೂ ವಿದ್ಯುತ್ ಸಂಪರ್ಕ ಬಂದಿಲ್ಲ. ಇದರಿಂದ ಆಕ್ರೋಶಿತರಾದ ಗ್ರಾಹಕರು ಮೆಸ್ಕಾಂ ಇಲಾಖೆಯಲ್ಲಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸಬ್ ಸ್ಟೇಶನ್ನಲ್ಲಿ ಕೆಲಸ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ಇಲಾಖೆ ಸ್ಥಗಿತಗೊಳಿಸಿದ್ದಾರೆ, ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಉತ್ತರಿಸಿದ್ದಾರೆ. ಬಳಿಕ ಗ್ರಾಹಕರು ಕೆಪಿಟಿಸಿಎಲ್ ಅಧಿಕಾರಿ ಸುನೀಲ್ ಅವರಿಗೆ ಕರೆ ಮಾಡಿದಾಗ ಉಡಾಫೆಯಿಂದ ಉತ್ತರಿಸಿದ್ದಾರೆ. ನಮಗೆ ಕೆಲಸ ಇದೆ. ಅದರಿಂದ ತೆಗೆದಿದ್ದೇವೆ. ನಮಗೆ ಇಷ್ಟ ಬಂದಾಗ ವಿದ್ಯುತ್ ಹಾಕುತ್ತೇವೆ, ನೀವು ಫೋನ್ ಕಟ್ ಮಾಡಿ ಎಂದು ಉಡಾಫೆಯಿಂದ ಉತ್ತರಿಸಿ ಪೋನ್ ಕಟ್ ಮಾಡಿದ್ದಾರೆ. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಮುಸ್ಲಿಮರಿಗೆ ಉಪವಾಸ ಇರುವುದರಿಂದ ಕೆಪಿಟಿಸಿಎಲ್ ನಿರ್ಧಾರದಿಂದ ತೊಂದರೆ ಅನುಭವಿಸಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ತೆಗೆದ ವಿದ್ಯುತ್ ಸಂಜೆ ಆರು ಗಂಟೆ ಬಳಿಕ ಹಾಕಿದ್ದಾರೆ. ಯಾವುದೇ ಮುನ್ಸೂಚನೆ ನೀಡದೇ ಬೆಳ್ಳಂಬೆಳಗ್ಗೆ ವಿದ್ಯುತ್ ಸ್ಥಗಿತ ಮಾಡಿದ್ದಲ್ಲದೇ ಈ ಬಗ್ಗೆ ಸಮರ್ಪಕ ಉತ್ತರ ನೀಡದೇ ಬೇಜಾಬ್ದಾರಿತನದಿಂದ ಉತ್ತರಿಸಿದ ಕೆಪಿಟಿಸಿಎಲ್ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
