ವಿಟ್ಲ: ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಹತ್ಯೆಗಾಗಿ ಅಕ್ರಮ ಸಾಗಾಟ ನಡೆಯುತ್ತಿದೆ. ಪೊಲೀಸರು ಅಕ್ರಮ ಗೋ ಸಾಗಾಟ ನಡೆಸುವವರ ಮೇಲೆ ಕೇಸು ಹಾಕದೇ, ಇದನ್ನು ತಡೆಯುವ ಹಿಂದೂ ಸಂಘಟನೆಯವರ ಮೇಲೆ ಕೇಸು ಹಾಕಲಾಗುತ್ತಿದೆ. ಕಳೆದ ಬಾರಿ ವಿಟ್ಲ ಪ್ರಖಂಡ ವ್ಯಾಪ್ತಿಯಲ್ಲಿ 19 ಪ್ರಕರಣಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನ್ನು ಪತ್ತೆಹಚ್ಚಲಾಗಿದೆ. ಗೋ ರಕ್ಷಣೆಗೆ ಮುಂದಾಗುವವರನ್ನು ರೌಡಿ ಶೀಟರ್ ಗಳು ಎಂದಾದರೆ ಇದನ್ನು ಉಗ್ರವಾಗಿ ಖಂಡಿಸಿ ಪ್ರತಿಭಟಿಸಬೇಕಾಗುತ್ತದೆ ಎಂದು ವಿಶ್ವಹಿಂದೂ ಪರಿಷತ್ ವಿಟ್ಲ ಪ್ರಖಂಡ ಕಾರ್ಯದರ್ಶಿ ಪದ್ಮನಾಭ ಕಟ್ಟೆ ತಿಳಿಸಿದರು.
ವಿಟ್ಲ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಸಂಘಟನೆಗಳ ಸದಸ್ಯರಿಗೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು.
ಬಜರಂಗದಳ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ ಮಾತನಾಡಿ ತಿಂಗಳಲ್ಲಿ ಬಕ್ರೀದ್ ಬರುವ ಹಿನ್ನೆಲೆಯಲ್ಲಿ ಅಕ್ರಮ ಗೋಸಾಗಾಟ ಹೆಚ್ಚಾಗುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕೇರಳಕ್ಕೆ ಅಂಟಿಕೊಂಡಿರುವ ವಿಟ್ಲ ಠಾಣೆಯ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ಹಾಕುವ ಮೂಲಕ ಅಕ್ರಮ ಗೋಸಾಗಾಟವನ್ನು ತಡೆಯಲು ಮುಂದಾಗಬೇಕು ಮತ್ತು ಅದರ ಹಿಂದೆ ಇರುವ ಆರೋಪಿಗಳನ್ನು ಬಂಧಿಸಬೇಕು. ಇದನ್ನು ಮಾಡದಿದ್ದರೆ ಸಂಘಟನೆಗಳು ಬೀದಿಗೆ ಇಳಿದು ಗೋರಕ್ಷಣೆ ಮಾಡಲು ಮುಂದಾಗಬೇಕಾಗುತ್ತದೆ ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಜಯಂತ್ ಸಿ.ಎಚ್ ವಿಟ್ಲ, ವಿಟ್ಲ ಪ್ರಖಂಡ ಕಾರ್ಯದರ್ಶಿ ಚರಣ್ ಕಾಪುಮಜಲು, ಉಪಾಧ್ಯಕ್ಷ ಜಯಕೊಟ್ಟಾರಿ, ಬಜರಂಗದಳ ಸಹ ಗೋರಕ್ಷ ಪ್ರಮುಖ್ ಯತೀಶ್ ಪೆರುವಾಯಿ ಉಪಸ್ಥಿತರಿದ್ದರು.
