ವಿಟ್ಲ: ಜೀವನದಲ್ಲಿ ಧರ್ಮ ಸಂಗ್ರಹ ಶ್ರೇಷ್ಠವಾದ ಕಾರ್ಯವಾಗಿದೆ. ಕ್ರೋಢಿಕರಿಸಿದ ಸಂಪತ್ತನ್ನು ಧರ್ಮ ಕಾರ್ಯದಲ್ಲಿ ವಿನಿಯೋಗಿಸಬೇಕು. ವ್ಯಕ್ತಿಯ ಅಂತರಂಗ ವಿಕಸನಕ್ಕೆ ಬ್ರಹ್ಮಕಲಶದಂತಹ ಕಾರ್ಯಗಳು ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಹೇಳಿದರು.
ಅವರು ಗುರುವಾರ ಕೇಪು ಖಂಡಿಗ ಶ್ರೀ ಕೈಲಾಸೇಶ್ವರ ದೇವ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಅಂಗವಾಗಿ ಮಾತಾಪಿತರ ಸಂಗಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಭಗವಂತನ ಸ್ಮರಣೆಯಲ್ಲಿ ಮಾಡುವ ಕೆಲಸ ಕಾರ್ಯಗಳಿಗೆ ಸದಾ ಅನುಗ್ರಹವಿರುತ್ತದೆ ಎಂದು ತಿಳಿಸಿದರು.
ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಮಾತಾಡಿ ಮಕ್ಕಳು ಹಣದ ಹಿಂದೆ ಹೋಗಿ ತಂದೆ ತಾಯಿಯನ್ನು ನಿರ್ಲಕ್ಷಿಸುವ ಕಾರ್ಯ ನಡೆಯುತ್ತಿದೆ. ಮಕ್ಕಳನ್ನು ಬೆಳೆಸುವ ರೀತಿಯ ಬಗ್ಗೆ ಪೋಷಕರು ಗಮನಕೊಡಬೇಕು. ಪಠ್ಯದ ಜತೆಗೆ ಸಂಸ್ಕಾರಯುತ ಶಿಕ್ಷಣ ನೀಡುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮೊಕ್ತೇಸರರಾದ ಪದ್ಮಿನಿ ರಾಮ ಭಟ್ ಆಲಂಗಾರು, ಶಕುಂತಳಾ ಶೆಟ್ಟಿ, ಭವಾನಿ ರೈ ಕೊಲ್ಯ, ಬೇಬಿ ಆರ್. ಶೆಟ್ಟಿ, ಕೆ. ದೇವದಾಸ ರೈ ಕೇಪು ಗುತ್ತು, ಕೇಪು ಶ್ರೀ ಮಹಮ್ಮಾಯಿ ಮರಾಟಿ ಸಂಘದ ಅಧ್ಯಕ್ಷ ಗೋವಿಂದ ನಾಯ್ಕ ನೆಗಳಗುಳಿ, ವಿಟ್ಲ ಮರಾಠಿ ಯುವವೇದಿಕೆ ಅಧ್ಯಕ್ಷ ಜೀವನ ಅನ್ನಮೂಲೆ, ಪ್ರೇಮಲತಾ ಕಟ್ಟೆ, ಕೆಯ್ಯೂರು ನಾರಾಯಣ ಭಟ್, ಆದರ್ಶ ಯುವಕ ಮಂಡಲದ ನವೀನ್ ನೀರ್ಕಜೆ, ಸೀತಾರಾಮ ಆಳ್ವ ಚೆಲ್ಲಡ್ಕ, ದೇವದಾಸ ಅಡ್ಯನಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಉಪಸ್ಥಿತರಿದ್ದರು.
ಆಡಳಿತ ಮೊಕ್ತೇಸರ ರವೀಶ್ ಕೆ. ಎನ್. ಖಂಡಿಗ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ನಾಯ್ಕ ಕೋಡಂದೂರು ವಂದಿಸಿದರು. ಕಾರ್ಯಕ್ರಮ ನಿರ್ವಹಣಾ ಸಮಿತಿಯ ಸುರೇಶ್ ಶೆಟ್ಟಿ ಪಡಿಬಾಗಿಲು ನಿರೂಪಿದರು.
