ವಿಟ್ಲ: ಅಡಕೆ ಕೊಳೆರೋಗದ ಪರಿಹಾರದ ವಿಚಾರದಲ್ಲಿ ರೈತರಿಗೆ ಗೊಂದಲವನ್ನು ಜಿಲ್ಲಾಡಳಿತ ಮಾಡುತ್ತಿದೆ. ಆನ್ಲೈನ್ ಪ್ರಕ್ರಿಯೆ ಮೂಲಕ ಹಣ ಖಾತೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರೂ ಬಂಟ್ವಾಳ ತಾಲೂಕಿನಲ್ಲಿ ಇದುವರೆಗೆ ಯಾವೊಬ್ಬ ರೈತನಿಗೂ ಬಂದ ಮಾಹಿತಿ ಇಲ್ಲ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ.ಕ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಎಚ್ಚರಿಸಿದ್ದಾರೆ.
ಅವರು ವಿಟ್ಲ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಜಿಲ್ಲೆಯ ಹಲವು ಭಾಗದಲ್ಲಿ ನದಿ ಹಾಗೂ ರಾಜ ಕಾಲುವೆ ಒತ್ತುವರಿಯ ಬಗ್ಗೆ ರೈತ ಸಂಘಕ್ಕೆ ದೂರುಗಳು ಬರುತ್ತಿವೆ. ಸ್ಥಳೀಯಾಡಳಿತ ಈ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಒತ್ತುವರಿಯನ್ನು ತೆರವು ಮಾಡಿ ರೈತರ ಹಿತ ಕಾಪಾಡಲು ಮುಂದಾಗದಿದ್ದರೆ ಹೋರಾಟಕ್ಕೆ ಇಳಿಯಬೇಕಾದೀತು ಎಂದು ತಿಳಿಸಿದರು.
ಬಂಟ್ವಾಳ ತಾಲೂಕು ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಮಾತನಾಡಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ದೆಂಜಿಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕ ರಾಜಕಾಲುವೆ ಒತ್ತುವರಿಯಾಗಿದೆ. ಇದರಿಂದ ನಾಯಿಲ, ಬೊಂಡಾಲ, ಕೋಮೆ, ಮರ್ಲಿಮಾರು ಪ್ರದೇಶದ ರೈತರ ಕೃಷಿ ಭೂಮಿಗಳಿಗೆ ನೀರು ನುಗ್ಗಿ ಕೃಷಿ ಕಾರ್ಯದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಭೂಮಾಫಿಯ ಮಂದಿ ೧೨ ಮೀಟರ್ ಅಗಲವಿದ್ದ ತೋಡನ್ನು 6 ಮೀಟರ್ ಮಾಡಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯದೇ ಕೃಷಿ ಭೂಮಿಗೆ ನುಗ್ಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ, ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ರೈತರಿಗೆ ನ್ಯಾಯೋಚಿತ ಪರಿಹಾರ ಸಿಕ್ಕಿಲ್ಲ. ಇದೇ ರೀತಿ ಮುಂದುವರಿದರೆ ಬಂಟ್ವಾಳ ಪುರಸಭೆ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ. ಸುದೇಶ್ ಮಯ್ಯ, ವಿಟ್ಲ ರೈತ ಸಂಘದ ಸುದೇಶ್ ಭಂಡಾರಿ, ರೈತರಾದ ಸೂರಜ್, ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.

