ವಿಟ್ಲ: ದುಬೈಯ ಶಾರ್ಜಾದಲ್ಲಿ ಕೆಲಸಕ್ಕೆಂದು ತೆರಳಿ ಸಿಲುಕಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಯುವಕರಿಗೆ ಕರ್ನಾಟಕ ಎನ್ಆರ್ಐ ಫೊರಂ-ಯುಎಇ ಅಧ್ಯಕ್ಷ ಪ್ರವೀಣ್ಕುಮಾರ್ ಶೆಟ್ಟಿ ವಕ್ವಾಡಿ ಅವರು ತುರ್ತು ನೆರವು ನೀಡುವ ಜತೆಗೆ ಅಭಯ ಹಸ್ತವನ್ನು ಚಾಚಿದ್ದಾರೆ.
ಬಂಟ್ವಾಳ ತಾಲೂಕು ಕೆದಿಲ ನಿವಾಸಿ ಶ್ರೀವತ್ಸ ವಿ., ಪುತ್ತೂರು ತಾಲೂಕಿನ ದುರ್ಗಾಪ್ರಸಾದ್ ಗೌಡ, ದೀಪಕ್ ಬನ್ನೂರು ಅವರು ದುಬೈ ಶಾರ್ಜಾದಲ್ಲಿ ಕೆಲಸಕ್ಕೆಂದು ತೆರಳಿದ್ದು, ಕೋವಿಡ್ 19ರ ಲಾಕ್ಡೌನ್ನಿಂದ ಹಿಂದಿರುಗಿ ಬರಲಾಗದೆ ಅಲ್ಲಿ ಸಿಲಿಕಿ ಹಾಕಿಕೊಂಡಿದ್ದಾರೆ.
ಭಾರತಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಕೆದಿಲ ನಿವಾಸಿ ಶ್ರೀವತ್ಸವ ವಿ. ಅವರ ಮನೆಯವರು ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸುವ ಕಾರ್ಯವನ್ನೂ ಮಾಡಿದ್ದರು. ಆದರೆ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು ಮಾಡಿರುವ ಹಿನ್ನಲೆಯಲ್ಲಿ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅವರ ಗಮನಕ್ಕೆ ವಿಚಾರ ಬರುತ್ತಿದ್ದಂತೆ ತುರ್ತಾಗಿ ಅವರ ಮಿತ್ರ ಅನಿಲ್ ಪಿಂಟೋ ಐಕಳ, ಕಿನ್ನಿಗೋಳಿ ಅವರನ್ನು ಸಂಪರ್ಕಿಸಿ, ಮೂವರ ಯೋಗ ಕ್ಷೇಮ ವಿಚಾರಿಸುವ ಕಾರ್ಯ ಮಾಡಿದ್ದರು. ಕರ್ನಾಟಕ ಎನ್ಆರ್ಐ ಫೊರಂ-ಯುಎಇ ಅಧ್ಯಕ್ಷ ಪ್ರವೀಣ್ಕುಮಾರ್ ಶೆಟ್ಟಿ ವಕ್ವಾಡಿ ಅವರು ಮೂವರ ರಕ್ಷಣೆ, ಪರಿಹಾರ ಮತ್ತು ಅಗತ್ಯ ಸಹಕಾರಕ್ಕೆ ನಾವಿದ್ದೇವೆ ಎಂದು ತುರ್ತು ನೆರವನ್ನೂ ನೀಡಿ ಧೈರ್ಯ ತುಂಬಿದ್ದಾರೆ.


