ವಿಟ್ಲ: ನ್ಯಾಯ ಬೆಲೆ ಅಂಗಡಿಗಳಲ್ಲಿ ತಲೆದೋರಿರುವ ಸರ್ವರ್ ಸಮಸ್ಯೆಯಿಂದ ವಿಟ್ಲ ಹೋಬಳಿ ಪ್ರದೇಶದಲ್ಲಿ ಜನರು ರೇಷನ್ ಅಕ್ಕಿಗಾಗಿ ರಾತ್ರಿಯೂ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದ್ದು, ಈ ಸಮಸ್ಯೆ ಬಗ್ಗೆ ಯಾರ ಉತ್ತರ ಇಲ್ಲದಂತಾಗಿದೆ.
ಕರ್ನಾಟಕ ರಾಜ್ಯಾದಾದ್ಯಂತ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು, ಬಂಟ್ವಾಳ ತಾಲೂಕು, ವಿಟ್ಲ ಹೋಬಳಿಯಲ್ಲಿ ಮತ್ತಷ್ಟು ಬಿಗಡಾಯಿಸಿದೆ. ಕಳೆದ ಕೆಲವು ತಿಂಗಳ ಹಿಂದೆ ನ್ಯಾಯ ಬೆಲೆ ಅಂಗಡಿಯಲ್ಲಿ ತಿಂಗಳಿನಲ್ಲಿ ಮೂರು ನಾಲ್ಕು ಬಾರಿ ಸರ್ವರ್ ಸಮಸ್ಯೆ ಎದುರಾಗುತ್ತಿತ್ತು. ಆದರೆ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಇಕೆವೈಸಿಯಿಂದಾಗಿ ತಿಂಗಳು ಪೂರ್ತಿ ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಸರ್ಕಾರ ಇಕೆವೈಸಿಯನ್ನು ಮುಂದೂಡಿತ್ತು. ಆದರೆ ಇಕೆವೈಸಿಯಲ್ಲಾದ ಎಡವಟ್ಟಿನಿಂದಾಗಿ ಸರ್ವರ್ ಸಮಸ್ಯೆ ಜನರಿಗೆ ಶಾಪವಾಗಿ ಪರಿಣಾಮಿಸಿದೆ. ವಿಟ್ಲ ಹೋಬಳಿ ಭಾಗದಲ್ಲಿ ಜನರು ರಾತ್ರಿಯೂ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅಂಗಡಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಸಂಜೆ 7 ಗಂಟೆಯಿಂದ 10 ಗಂಟೆವರೆಗೂ ಕ್ಯೂ ನಿಂತರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.
