ವಿಟ್ಲ: ವಿಟ್ಲ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಯುವ ಸಂಸತ್ತಿನ ಪ್ರದರ್ಶನ ನಡೆಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರ ಎಲ್. ಎನ್. ಕೂಡೂರು ಕಾರ್ಯಕ್ರಮ ಉದ್ಘಾಟಿಸಿ ಆಡಳಿತ ಸರಕಾರಗಳ ಅಧಿವೇಶನದಂತೆ ಪ್ರೌಢಶಾಲಾ ಮಟ್ಟದಲ್ಲಿ ಶಿಸ್ತುಬದ್ಧ ಅಧಿವೇಶನ ವಿದ್ಯಾರ್ಥಿಗಳಿಂದ ನಡೆಯಬೇಕೆಂದು ತಿಳಿಸಿದರು.
ಭಾರತದ ಸಂಸದೀಯ ಮಾದರಿಯಲ್ಲಿಯೇ ಕಾರ್ಯ ಕಲಾಪಗಳು ನಡೆದವು. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಪ್ರತಿನಿಧಿಗಳು ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮೊದಲಿಗೆ ಸ್ಪೀಕರ್ ಮೂಲಕ ಯುವ ಮಂತ್ರಿಗಳ ಪ್ರತಿಜ್ಞಾ ಸ್ವೀಕಾರ, ಸಂತಾಪ ಸೂಚಕ ಸಭೆ, ಮಸೂದೆ ಮಂಡನೆ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ ಇವೆಲ್ಲವನ್ನೂ ಒಳಗೊಂಡಿತ್ತು. ಸ್ವಚ್ಛಭಾರತ ಅಭಿಯಾನ, ಶಿಕ್ಷಣ ನೀತಿ ಮೊದಲಾದ ಪ್ರಚಲಿತ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ಮಧ್ಯೆ ಅಮೆರಿಕಾದ ಅಧ್ಯಕ್ಷರು ಹಾಗೂ ಜಪಾನಿನ ಸಂಸತ್ತಿನ ನಿಯೋಗವು ಭೇಟಿ ನೀಡುವುದರ ಮೂಲಕ ಅಂತಾರಾಷ್ಟ್ರೀಯ ಬಾಂಧವ್ಯವನ್ನು ವೃದ್ಧಿಸುವ ಪ್ರದರ್ಶನವು ಅಧಿವೇಶನದ ನೈಜತೆಯನ್ನು ಹೆಚ್ಚಿಸಿತು.
ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ ಅಳಿಕೆ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ. ರಾಮಚಂದ್ರ ರಾವ್ ಮಾತನಾಡಿ, ವಿದ್ಯಾರ್ಥಿಗಳ ಈ ಮಾದರಿ ಯುವ ಸಂಸತ್ತು ಶೇಕಡಾ ನೂರರಷ್ಟು ಪರಿಪೂರ್ಣವಾಗಿದ್ದು ಎಲ್ಲಾ ಕಲಾಪಗಳೊಂದಿಗೆ ನಡೆದಿರುವುದನ್ನು ಶ್ಲಾಘಿಸಿದರು. ವಕೀಲ ಜೇಸಿ ಮೋಹನ್ ಕಾರ್ಯಕ್ರಮದ ಬಗ್ಗೆ ಪ್ರಶಂಸಿಸಿ, ಇದೊಂದು ಎಲ್ಲಾ ವಿದ್ಯಾಸಂಸ್ಥೆಗಳಿಗೆ ಮಾದರಿ ಎಂದರು. ಶಾಲಾ ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿ ಪ್ರಕಾಶ್ ಕುಕ್ಕಿಲ, ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಸುಜಾತ ಸ್ವಾಗತಿಸಿ, ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಅಭಿಲಾಷ್, ಶ್ರೀಶ.ಟಿ, ಶ್ರೀವಾಸ ನಾವಡ, ಶ್ರೀಶ ಕುಮಾರ ಪ್ರಾರ್ಥಿಸಿದರು. ಸಹಶಿಕ್ಷಕರಾದ ಗುರುವಪ್ಪ ನಾಕ್, ಸುಜಾತ.ಪಿ, ಚಿತ್ರಲತಾ ಅವರು ಕಾರ್ಯಕ್ರಮ ಸಂಯೋಜಿಸಿದರು. ಸಂಸ್ಥೆಯ ಪ್ರಿನ್ಸಿಪಾಲ್ ಜಯರಾಮ ರೈ ವಂದಿಸಿದರು.


