ವಿಟ್ಲ: ಮಾತೃ ಸಂಸ್ಕೃತಿಯೇ ಜೀವನಕ್ಕೆ ಮಹತ್ವದ್ದಾಗಿದೆ. ಮಾತೆಯರ ಮೂಲಕ ಮಕ್ಕಳಿಗೆ ಬದುಕಿಗೆ ಪೂರಕವಾದ ಸಂಸ್ಕೃತಿ, ಆಚಾರ, ವಿಚಾರ, ಸಂಸ್ಖಾರ ಸಿಕ್ಕಿದಾಗ ಅವರೆಂದೂ ಸಹ ಅಡ್ಡದಾರಿಯ ಜೀವನ ಸಾಗಿಸಲಾರರು. ಮದ್ಯ ಮುಕ್ತ ಸಮಾಜ ದೇಶದ ಪ್ರಗತಿಗೆ ಕಾರಣವಾಗುವುದು ಎಂದು ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ತಿಳಿಸಿದರು.


ಅವರು ಪುಣಚ ಗ್ರಾಮದ ಅಜ್ಜಿನಡ್ಕ ದುರ್ಗಾಪರಮೇಶ್ವರಿ ಭಜನಾ ಸೇವಾಟ್ರಸ್ಟ್ ಹಾಗೂ ವಿಟ್ಲ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಶ್ರೀ ಮಹಿಷಮರ್ದಿನಿ ನವಜೀವನ ಸಮಿತಿ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯಮುಕ್ತ ನವಜೀವನದ ಸದಸ್ಯರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ಈ ಮೂಲಕ ತನ್ನ ನೈಜ ಉದ್ದೇಶವನ್ನು ಅನುಷ್ಠಾನಗೊಳಿಸುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ, ಪುಣಚ ಗ್ರಾಮ ಪಂಚಾಯತ್ ಸದಸ್ಯ ಉದಯ ಕುಮಾರ್ ದಂಬೆ ವಹಿಸಿದ್ದರು.
ಯೋಜನೆಯ ಬಿ.ಸಿ ಟ್ರಸ್ಟ್ ವಿಟ್ಲ ಯೋಜನಾಧಿಕಾರಿ ಮೋಹನ್ ವಿಟ್ಲ ವಲಯ ಒಕ್ಕೂಟಗಳ ಅಧ್ಯಕ್ಷ ಜನಾರ್ದನ ಪದ್ಮಶಾಲಿ, ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರ ಅಧ್ಯಕ್ಷ ವಿನಯಕೃಷ್ಣ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎನ್.ಎಸ್ ಕ್ರಶರ್ ಪರವಾಗಿ ಕುಟ್ಟಿಶ್ವರನ್ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಮಹಿಷಮರ್ದಿನಿ ನವಜೀವನ ಸಮಿತಿ ಸದಸ್ಯ ವಿಶ್ವನಾಥ ಸ್ವಾಗತಿಸಿ, ರಾಜೇಂದ್ರ ರೈ ವಂದಿಸಿದರು. ಯೋಜನೆಯ ಮೇಲ್ವೀಚಾರಕ ರಮೇಶ್.ಎಸ್. ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.
ಕುಮಾರ್ ಹೊಳ್ಳ ಕೊಪ್ಪಳ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಸಭೆಯ ಬಳಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸಂಜೆ ಭಜನಾ ಕಾರ್ಯಕ್ರಮ, ಶ್ರೀ ಅಯ್ಯಪ್ಪ ದೀಪಾರಾಧನೆ, ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.












