ವಿಟ್ಲ : ಮಾಣಿ ಪೇಟೆಯಲ್ಲಿ ಎಸ್.ಸಿ.ಮೊಬೈಲ್ ಅಂಗಡಿ ಮಾಲಕ ಅಬ್ದುಲ್ ಸಲಾಂ ತನ್ನ ಅಂಗಡಿಗೆ ಡಿ.30ರಂದು ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು ಆತನನ್ನು ಬಂಧಿಸದೇ ಇದ್ದಲ್ಲಿ ಡಿ.16 ರಂದು ಪ್ರತಿಭಟನೆ ಹಮ್ಮಿಕೊಳ್ಳಲು ಹಿಂದೂ ಪರ ಸಂಘಟನೆಗಳು ನಿರ್ಧರಿಸಿತ್ತು. ಆದರೆ ಆರೋಪಿಯನ್ನು ಬಂಧಿಸಲಾಗಿದ್ದು ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರನ್ನು ಅಭಿನಂದಿಸುವುದರ ಜತೆಗೆ ವಕೀಲರು ಇಂತಹ ಆರೋಪಿ ಪರ ವಾದ ಮಂಡಿಸಬಾರದು ಎಂದು ವಿಶ್ವ ಹಿಂದೂ ಪರಿಷದ್, ಬಜರಂಗದಳ ಮುಖಂಡರು ವಿನಂತಿಸಿದರು.
ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ ಮಾತನಾಡಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, 20 ದಿನಗಳ ಬಳಿಕವೂ ಬಂಧಿಸಿರಲಿಲ್ಲ. ಪರಿಣಾಮವಾಗಿ ಹಿಂದೂ ಪರ ಸಂಘಟನೆಗಳು ಕೃತ್ಯವನ್ನು ಖಂಡಿಸಿ, ಜ.16ರಂದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನ ಕೈಗೊಂಡಿತ್ತು. ತಕ್ಷಣ ಎಚ್ಚೆತ್ತ ಪೊಲೀಸ್ ಇಲಾಖೆ ಆರೋಪಿಯನ್ನು ಆದಿತ್ಯವಾರ ಬಂಧಿಸಿದೆ. ಪೊಲೀಸರ ಈ ಕಾರ್ಯಕ್ಕೆ ಅಭಿನಂದನೆಯನ್ನು ಸಲ್ಲಿಸುವುದರ ಜತೆಗೆ ಇಂತಹ ಸಮಾಜಘಾತುಕ ಕೃತ್ಯಗಳನ್ನು ನಡೆಸುತ್ತಿರುವ ಮತಾಂಧರಿಗೆ ಯಾವುದೇ ವಕೀಲರು ವಾದ ಮಂಡಿಸಬಾರದು. ಆ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಸಹಕರಿಸಬೇಕೆಂದು ವಿನಂತಿಸುತ್ತೇವೆ. ಈ ಪ್ರಕರಣದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಸಂಘಟನೆಗಳ ಮುಖಂಡರ ಚಾರಿತ್ರ್ಯವಧೆ ನಡೆಸುತ್ತಿರುವುದೂ ನಮ್ಮ ಗಮನಕ್ಕೆ ಬಂದಿದೆ. ಇಲಾಖೆ ಇದರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಅವರು ವಿನಂತಿಸಿದರು.
ಮಾಣಿ ಸುತ್ತಮುತ್ತಲು ವ್ಯವಸ್ಥಿತವಾಗಿ ಡ್ರಗ್ ಮಾಫಿಯ ಕಾರ್ಯಾಚರಣೆ ನಡೆಸುತ್ತಿದ್ದು, ದುಷ್ಕೃತ್ಯಗಳನ್ನು ನಡೆಸುತ್ತಿದೆ. ಇಂತಹ ವ್ಯಕ್ತಿಗಳನ್ನು ಗುರುತಿಸಿ, ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದೇ ಇದ್ದಲ್ಲಿ ಹಿಂದೂ ಸಂಘಟನೆಗಳೇ ಕಾರ್ಯಾಚರಣೆಗಿಳಿಯುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡ ಕಾರ್ಯಾಧ್ಯಕ್ಷ ಪದ್ಮನಾಭ ಕಟ್ಟೆ, ಉಪಾಧ್ಯಕ್ಷ ಜಯ ಕೊಟ್ಟಾರಿ, ವಿಟ್ಲ ಪ್ರಖಂಡ ಬಜರಂಗದಳ ಸಂಚಾಲಕ ಅಕ್ಷಯ ರಜಪೂತ್ ಕಲ್ಲಡ್ಕ, ಗೋಳ್ತಮಜಲು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಪತ್ ಕೋಟ್ಯಾನ್ ಕಡೆಶ್ವಾಲ್ಯ ಉಪಸ್ಥಿತರಿದ್ದರು.
