ವಿಟ್ಲ: ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ಮಾ.15ರಂದು ವಿಟ್ಲ ರಥದ ಗದ್ದೆಯಲ್ಲಿ ನಡೆಯುವ ವಿರಾಟ್ ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಪ್ರಖಂಡದ ಬೇರೆ ಬೇರೆ ಕಡೆಗಳಿಂದ ಬರುವ ವಾಹನ ನಿಲುಗಡೆಗೆ ಮೂರು ಕಡೆಗಳಲ್ಲಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಜನರು ಸಂಘಟಕರೊಂದಿಗೆ ಸಹಕರಿಸಬೇಕೆಂದು ಸ್ವಾಗತ ಸಮಿತಿ ಕೋಶಾಧಿಕಾರಿ ಅರುಣ್ ವಿಟ್ಲ ಹೇಳಿದರು.
ಸಾಲೆತ್ತೂರು ಭಾಗದಿಂದ ಬರುವವರಿಗೆ ವಿಠಲ ಪದವಿಪೂರ್ವ ಕಾಲೇಜು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯಪ್ರಾಥಮಿಕ ಶಾಲೆಯ ಮೈದ್ಯಾನದಲ್ಲಿ, ಕನ್ಯಾನ, ಪುಣಚ, ಅಡ್ಯನಡ್ಕ ಭಾಗದಿಂದ ಬರುವವರಿಗೆ ಹಾಗೂ ಕುಂಡಡ್ಕ, ಪುತ್ತೂರು, ಕಬಕ ಭಾಗದಿಂದ ಬರುವವರಿಗೆ ಬಾಕಿಮಾರು ಗದ್ದೆಯಲ್ಲಿ, ಕಲ್ಲಡ್ಕ ಭಾಗದಿಂದ ಬರುವ ವಾಹನಗಳಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ವಾಹನ ನಿಲುಗಡೆ ಮಾಡಬೇಕು ಎಂದು ವಿಟ್ಲ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಸಮಾಜೋತ್ಸವ ಸಮಿತಿ ಅಧ್ಯಕ್ಷ ಹರೀಶ್ ನಾಯಕ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಆರ್ಯನ್ ರಾಥೋಡ್, ಕಾರ್ಯದರ್ಶಿ ದಯಾನಂದ ಉಜಿರೆಮಾರ್, ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನಾಗೇಶ್ ಬಸವನಗುಡಿ ಉಪಸ್ಥಿತರಿದ್ದರು.


