ಬಂಟ್ವಾಳ, ಜೂ. ೧೩: ಕುಸಿಯುವ ಭೀತಿಯಲ್ಲಿದ್ದ ಪಾಣೆಮಂಗಳೂರಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯವಿದ್ದ ೧೫ ಮಕ್ಕಳನ್ನು ಮೊಗರ್ನಾಡುವಿನ ಹೊಸ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು.

೧೯೭೭ರಿಂದ ಪಾಣೆಮಂಗಳೂರಿನ ಬಂಗ್ಲೆಗುಡ್ಡೆಯ ಪುರಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ವಸತಿ ನಿಲಯ ಕಳೆದ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಗಳಾಗಿತ್ತು.
ಈ ಹಾಸ್ಟೆಲ್ ಕಟ್ಟಡದ ಕೊಠಡಿಯೊಂದರ ಮೇಲ್ಛಾಚಣಿ ಕುಸಿದು ಫ್ಯಾನ್ ಏಕಾಏಕಿ ಕಳಚಿ ಬಿದ್ದಿದ್ದ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈಗಾಗಲೇ ನಿಗದಿಪಡಿಸಿದ್ದ ಹೊಸ ಬಾಡಿಗೆ ಕಟ್ಟಡಕ್ಕೆ ಹಾಸ್ಟೆಲ್ನಲ್ಲಿದ್ದ ಮಕ್ಕಳನ್ನು ಗುರುವಾರ ಸ್ಥಳಾಂತರಿಸಿದ್ದಾರೆ.
ಗುರುವಾರ ಬೆಳಿಗ್ಗೆ ಹಾಸ್ಟೆಲ್ನಲ್ಲಿದ್ದ ಕಪಾಟುಗಳನ್ನು ಅಡಿಗೆ ಸಾಮಾಗ್ರಿಗಳನ್ನು ಕೂಡ ಸ್ಥಳಾಂತರಿಸಲಾಗಿದ್ದು, ಮಕ್ಕಳಿಗೆ ತಕ್ಕ ಮಟ್ಟಿಗೆ ಭದ್ರತೆ ದೊರೆತಂತಾಗಿದೆ.