Sunday, June 29, 2025

ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು-ಹೇಮಾವತಿ ವಿ. ಹೆಗ್ಗಡೆ

ಉಜಿರೆ: ಪ್ರಾಚೀನ ಮತ್ತು ಆಧುನಿಕತೆಯ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ, ಪರಂಪರೆ ಮತ್ತು ವೈವಿಧ್ಯಮಯ ಹಿನ್ನೆಲೆ ಹೊಂದಿರುವ ತುಳು ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೇಳರಿಮೆ ಹೊಂದದೆ ಅಭಿಮಾನ, ಗೌರವದೊಂದಿಗೆ ಉಳಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಎಸ್.ಡಿ.ಎಂ. ತುಳುಪೀಠ ಮತ್ತು ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ತುಳು ಸಂಘದ ಜಂಟಿ ಆಶ್ರಯದಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ ತುಳುವೆರೆ ಪಾರಂಪರಿಕ ಜ್ಞಾನ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಳುನಾಡಿನ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು, ಸಂದಿ-ಪಾಡ್ದನಗಳು, ತಾಳ ಮದ್ದಳೆ, ಯಕ್ಷಗಾನ, ಜಾನಪದ ಕಲೆಗಳು, ಬಲೀಂದ್ರ ಪೂಜೆ, ಭೂತಾರಾಧನೆ, ನಾಗಾರಾಧನೆ, ಕೃಷಿ ಸಂಸ್ಕೃತಿ ನಮ್ಮ ಸಾರ್ಥಕ ಬದುಕಿಗೆ ಪ್ರೇರಕವಾಗಿವೆ. ಸರ್ವಧರ್ಮೀಯರೊಂದಿಗೆ ಸಾಮರಸ್ಯದ ಸಾರ್ಥಕ ಬದುಕಿಗೆ ಮಾರ್ಗದರ್ಶಕವಾಗಿದೆ. ತನ್ನ ಬಾಲ್ಯದಲ್ಲಿ ಪೆರಾಡಿ ಬೀಡಿನಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಸವಿದ ಮಧುರ ಕ್ಷಣಗಳನ್ನು ಧನ್ಯತೆಯಿಂದ ಸ್ಮರಿಸಿದ ಅವರು, ಕಂಬಳ, ಒನಕೆಯಿಂದ ಭತ್ತಕುಟ್ಟುವುದು, ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ, ಬಲೀಂದ್ರ ಪೂಜೆ, ನೊಗ-ನೇಗಿಲು, ಹಾರೆ-ಪಿಕ್ಕಸು ಮೊದಲಾದ ಕೃಷಿ ಪರಿಕರಗಳಿಗೆ ಪೂಜೆ, ನೇಜಿ ನೆಡುವುದು, ಕೃಷಿಯಲ್ಲಿ ಮಹಿಳೆಯರು ರಾಗದಿಂದ ಸರಾಗವಾಗಿ ಹಾಡುತ್ತಿದ್ದ ಸಂದಿ-ಪಾಡ್ದನಗಳ ಸೊಬಗನ್ನು ಅವರು ವಿವರಿಸಿದರು.


ಧಣಿ-ಒಕ್ಕಲು ಸಂಬಂಧ, ಅಜ್ಜನ ಬಿಸಿ ನೀರಿನ ಸ್ನಾನ, ಕಾಟು ಮಾವಿನ ಮಿಡಿ ತಿಂದ ಅನುಭವ, ಉಪ್ಪಿನಕಾಯಿ, ಪತ್ರೊಡೆಯ ಔಷಧಿಯ ಗುಣ ಹಾಗೂ ರೋಗ ನಿರೋಧಕ ಶಕ್ತಿಯ ಮಹತ್ವವನ್ನುಅವರು ವಿವರಿಸಿದರು. ತನ್ನ ಅಮ್ಮನ ಕಾವ್ಯ ವಾಚನಕ್ಕೆ ಮನೆಯ ಕೂಲಿ ಕೆಲಸದವರೇ ಶ್ರೋತೃಗಳು ಆಗಿದ್ದರು.
ತುಳು ಭಾಷೆ ನಮ್ಮ ಮನೆಯ ಮಾತಾಗಬೇಕು.ನಿತ್ಯವೂ ಆಡು ಭಾಷೆಯಾಗಬೇಕು.ನಾಗಾರಾಧನೆ, ಭೂತಾರಾಧನೆಯೊಂದಿಗೆ ವನಸಿರಿ ಹಾಗೂ ಜಲ ಸಂಪತ್ತು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.


ಎಸ್.ಡಿ.ಎಂ.ಕಾಲೇಜಿನ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ರಚಿಸಿದ ಅರಿವು ಡಿಜಿಟಲ್ ಪತ್ರಿಕೆಯನ್ನು ಡಾ. ಬಿ. ಯಶೋವರ್ಮ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಯುವಜನತೆ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಮಂಗಳೂರು ವಿ.ವಿ. ಕುಲಪತಿ ಡಾ. ಪಿ. ಸುಬ್ರಹ್ಮಣ್ಯಯಡಪಡಿತ್ತಾಯ ಮಾತನಾಡಿ, ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ವೈವಿದ್ಯಮಯ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮರೆತರೂ, ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು ವೈಜ್ಞಾನಿಕ ಹಿನ್ನಲೆ ಹೊಂದಿದ್ದು ಗೊಡ್ಡು ಸಂಪ್ರಾಯಗಳಲ್ಲ. ತುಳುನಾಡಿನ ನಂಬಿಕೆಗಳು ಮೂಡ ನಂಬಿಕೆಗಳಲ್ಲ, ಮೂಲ ನಂಬಿಕೆಗಳು ಎಂದು ಅವರು ಸ್ಪಷ್ಟಪಡಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸರ್ಕಾರದ ಸಹಯೋಗದೊಂದಿಗೆ ತುಳುವನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಉಜಿರೆಯಲ್ಲಿ ನಡೆದ ವಿಶ್ವ ತುಳ ಸಮ್ಮೇಳನದ ಸವಿ ನೆನಪನ್ನು ಅವರು ಸ್ಮರಿಸಿದರು.ತುಳು ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ಯುವಜನತೆ ಕಟಿಬದ್ಧರಾಗಬೇಕು ಎಂದು ಅವರು ಸಲಹೆ ನೀಡಿದರು.
ಮಂಗಳೂರು ವಿ.ವಿ. ತುಳು ಪೀಠದ ಸಂಯೋಜಕ ಡಾ.ಮಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸತೀಶ್ಚಂದ್ರ ಸ್ವಾಗತಿಸಿದರು. ಡಾ. ಸನ್ಮತಿ ಕುಮಾರ್‌ ವಂದಿಸಿದರು. ಡಾ. ದಿವಾಕರ ಕೆ. ಕಾರ್ಯಕ್ರಮ ನಿರೂಪಿಸಿದರು.

More from the blog

ನಿರ್ಧಿಷ್ಟ ಗುರಿಯೊಂದಿಗೆ ಯುವವಾಹಿನಿಯ ಸಂಘಟಿತ ಪಯಣ : ಭುವನೇಶ್ ಪಚ್ಚಿನಡ್ಕ..

ಬಂಟ್ವಾಳ : ನಿರ್ದಿಷ್ಟ ಗುರಿಯೊಂದಿಗೆ ಸಾಧನಾ ಪಥದಲ್ಲಿ ಯುವವಾಹಿನಿ ಸಂಘಟಿತವಾಗಿ ಪಯಣಿಸುತ್ತಿದೆ ಎಂದು ಯುವವಾಹಿನಿ ಬಂಟ್ವಾಳ ಘಟಕದ ರಜತವರ್ಷದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು. ಅವರು ರವಿವಾರ ಬಿ ಸಿ ರೋಡ್ ಯುವವಾಹಿನಿ ಭವನದಲ್ಲಿ...

ಮಕ್ಕಳಲ್ಲಿ ಹೃದಯಾಘಾತಕ್ಕೆ ಮೊಬೈಲ್‌ ಬಳಕೆ ಕಾರಣ – ಆಘಾತಕಾರಿ ವರದಿ ಬೆಳಕಿಗೆ..

ಇತ್ತೀಚೆಗೆ ವಯಸ್ಕರು ಮಾತ್ರವಲ್ಲದೆ ಯುವ ಜನತೆ, ಮಕ್ಕಳಲ್ಲಿ ಕೂಡಾ ಹೃದಯಾಘಾತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಆನೇಕರು ಹೃದಯಾಘಾತದಿಂದ ಇಹಲೋಕ ತ್ಯಜಿಸುತ್ತಿದ್ದಾರೆ. ಅದರಲ್ಲೂ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇದೀಗ...

ತುಂಬೆ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ..

ಬಂಟ್ವಾಳ : ಡಾ.ಬಿ.ಅಹಮದ್ ಹಾಜಿ ಅವರ ಸಾಧನಾ ಗಾಥೆಯನ್ನು ಹಾಗೂ ಅವರ ಜೀವನದ ಬಗ್ಗೆ ಕೇಳಿದಾಗ ಅವರು ಎಷ್ಟೊಂದು ಉದಾತ್ತ ವ್ಯಕ್ತಿತ್ವದವರು ಮತ್ತು ಶಿಸ್ತು ಮತ್ತು ಬದ್ಧತೆಯಲ್ಲಿ ಬಾಳಿದವರು ಎನ್ನುವುದು ಅರ್ಥವಾಗುತ್ತದೆ. ಅಂಥವರನ್ನು...

Pneumonia : ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಬಿಜೆಪಿ ಕಾರ್ಯಕರ್ತ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು..

ಬಂಟ್ವಾಳ: ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಕುಕ್ಕಾಜೆ ಬಿಜೆಪಿ ಕಾರ್ಯಕರ್ತನೊರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಂಚಿ ಸಮೀಪದ ಕುಕ್ಕಾಜೆ ನಿವಾಸಿ ಬಿಜೆಪಿ ಯುವ ಕಾರ್ಯಕರ್ತ ,ಸಾಮಾಜಿಕ...