ಉಜಿರೆ: ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಹಾಗೂ ಜೀವನ ಶೈಲಿ ಸುಧಾರಣೆಯಿಂದ ಆರೋಗ್ಯ ರಕ್ಷಣೆಯೊಂದಿಗೆ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಪಿ. ಯನ್. ರಂಜಿತ್ಕುಮಾರ್ ಹೇಳಿದರು.
ಆವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಯಂ. ಪ್ರಕೃತಿ ಚಿಕಿತ್ಸಾ ಯೋಗ ವಿಜ್ಞಾನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.



ಕಾಲೇಜಿನ ವಾರ್ಷಿಕ ಸಂಚಿಕೆ ‘ಸೃಷ್ಟಿ’ಯನ್ನು ಅವರು ಬಿಡುಗಡೆಗೊಳಿಸಿದರು.
ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅನೇಕ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಹೆಚ್ಚಿನ ಆದ್ಯತೆಯೊಂದಿಗೆ ಪ್ರಚಾರ ನೀಡುತ್ತಿದ್ದಾರೆ. ಪ್ರಕೃತಿ ಚಿಕಿತ್ಸಾ ವಿಧಾನ ಅತ್ಯಂತ ವೈಜ್ಞಾನಿಕ ಚಿಕಿತ್ಸಾ ಕ್ರಮವಾಗಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಧರ್ಮಸ್ಥಳದ ಶಾಂತಿವನದಲ್ಲಿ ‘ಸಾಧಕ’ ರಾಗಿ ಶುಶ್ರೂಷೆ ಪಡೆಯುತ್ತಿರುವ ಲಂಡನ್ ನ ಡಾ.ಪಿ.ಕೆ. ವೇಣು ಮಾತನಾಡಿ, ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸೌಲಭ್ಯ ಹಾಗೂ ಚಿಕಿತ್ಸಾ ವಿಧಾನವನ್ನು ಶ್ಲಾಘಿಸಿ ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಇಂದು ವಿಶ್ವದೆಲ್ಲೆಡೆ ಹೆಚ್ಚಿನ ಗೌರವ ಹಾಗೂ ಮಾನ್ಯತೆ ಇದೆ.ಪ್ರಕೃತಿ ಚಿಕಿತ್ಸಾ ವೈದ್ಯರ ಬದ್ಧತೆ, ಗೌರವ ಮತ್ತು ಅಭಿಮಾನದಿಂದ ಪ್ರಾಮಾಣಿಕ ಸೇವೆ ನೀಡಬೇಕು. ಉಜಿರೆಯಲ್ಲಿ ಕಲಿತ ಮುನ್ನೂರು ಮಂದಿ ಪ್ರಕೃತಿ ಚಿಕಿತ್ಸಾ ವೈದ್ಯರು ಇಂದು ವಿದೇಶಗಳಲ್ಲಿ ಸೇವೆ ನೀಡುತ್ತಿದ್ದಾರೆ. ದೇಶದ 31 ರಾಜ್ಯಗಳ ವಿದ್ಯಾರ್ಥಿಗಳು ಉಜಿರೆ ಕಾಲೇಜಿನಲ್ಲಿ ಕಲಿಯುತ್ತಿದ್ದು ಇದು‘ಮಿನಿ ಭಾರತವೇ’ಆಗಿದೆ ಎಂದು ಹೇಳಿದರು. ಇಲ್ಲಿನ ಕಾಲೇಜಿಗೆ ಉತೃಷ್ಟತಾ ಕೇಂದ್ರದ ಮಾನ್ಯತೆ ದೊರಕಿದೆ ಎಂದರು.
ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನವನ್ನು ನೂತನ ಮಸೂದೆಯಲ್ಲಿ ಅಳವಡಿಸಬೇಕು ಎಂದು ಹೆಗ್ಗಡೆಯವರು ಕೋರಿದರು.
ಎಸ್.ಡಿ.ಯಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಉಪಸ್ಥಿತರಿದ್ದರು.
ಪ್ರೊ.ಜ್ಯೋಸ್ನಾ ಕಾಲೇಜಿನ ವರದಿ ಸಾದರ ಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು.ಡಾ. ಜ್ಯೋಸ್ನಾ ಕಾರ್ಯಕ್ರಮ ನಿರೂಪಿಸಿದರು.












