ವಿಟ್ಲ: ಒಡಿಯೂರು ರಥೋತ್ಸವ ತುಳುನಾಡ ಜಾತ್ರೆಯ ಅಂಗವಾಗಿ 25 ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ನಡೆಯಿತು.

ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳು, ವಿಶ್ವಮಾನ್ಯವಾಗಿರುವ ತುಳು ಭಾಷೆ ಮತ್ತು ತುಳು ಸಂಸ್ಕೃತಿಯ ತುಳುವರಿಗೆ ಜಗದೆಲ್ಲೆಡೆಯೂ ಗೌರವ ಆದರವಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಆಂಗ್ಲ ಭಾಷೆ ವ್ಯಾಮೋಹದಲ್ಲಿ ಮಾತೃಭಾಷೆ ಮರೆಯುತ್ತಿದ್ದೇವೆ. ಆಂಗ್ಲ ಭಾಷೆಗೆ ವಿರೋಧ ಬೇಡವಾದರೂ ಮಾತೃಭಾಷೆಯನ್ನು ಅನಾದರ ಮಾಡಿ ಆಂಗ್ಲ ಭಾಷೆಯತ್ತ ಆಸಕ್ತಿ ತೋರುವುದು ಸಲ್ಲದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಒಡಿಯೂರು ಜಾತ್ರೆಯ ಸಂದರ್ಭದಲ್ಲಿ ಧರ್ಮಪೀಠದಲ್ಲಿ ತುಳು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸ್ವಾಗತಾರ್ಹ ಸಾರ್ವಕಾಲಿಕವಾಗಿ ಉಳಿಯುವ ಅಧ್ಯಯನಶೀಲ ರಚಿಸುವತ್ತ ಸಾಹಿತಿಗಳು ಗಮನಹರಿಸಬೇಕು. ಇಚ್ಛಾಶಕ್ತಿ ಕೊರತೆಯಿಂದ ತುಳುವಿಗೆ ಸಾಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ. ಸಿಗುವಂತಾಗಲು ಒಟ್ಟಾಗಿ ಹೋರಾಡಬೇಕು. ಇಂತಹ ಸಮ್ಮೇಳನ ಸ್ಫೂರ್ತಿ ನೀಡುವುದರ ಜೊತೆಗೆ ಮಾದರಿ ಆಗಬೇಕು. ಮುಂಬಯಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಪೀಠಗಳು ಇವೆ. ಇವುಗಳ ಸದುಪಯೋಗ ಮಾಡಿಕೊಳ್ಳಬೇಕು ಹೇಳಿದರು.
ಸಮ್ಮೇಳನದಲ್ಲಿಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಕ್ಷೇತ್ರಗಳ ಪ್ರಮುಖರಾದ ಡಾ ಎಸ್. ಆರ್. ಅರುಣ ಕುಮಾರ್,,( ತುಳುನಾಡ ಸಂತ ಪರಂಪರೆ), ಡಾ. ನವೀನ್ ಕುಮಾರ್ ಮರಿಕೆ(ತುಳುನಾಡ ಜಾನಪದ ಪರಂರೆ) ಹಾಗೂ ಗುಂಡ್ಯಡ್ಕ ಮಲ್ಲಿಕಾ ಜೆ. ರೈ(ಜಾನಪದ ಸಾಹಿತ್ಯ ಪರಂಪರೆ) ವಿಚಾರ ಮಂಡಿಸಿದರು.
ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ತುಳುಲಿಪಿಯಲ್ಲಿ ಬರೆದ ‘ಶ್ರೀ ಮದ್ಭಗವದ್ಗೀತೆ ‘ ಮತ್ತು ಡಾ. ವಸಂತ ಕುಮಾರ್ ಪೆರ್ಲ ಅವರ’ ಪುಳ್ಕೂರ ಬಾಚೆ’ ತುಳು ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ತುಳುಸಿರಿ ಪ್ರಶಸ್ತಿ :
ಇದೇ ವೇದಿಕೆಯಲ್ಲಿ ಪಾಡ್ದನ ಕಲಾವಿದೆ ಅಳದಂಗಡಿ ಕರ್ಗಿ ಶೆಡ್ತಿ, ತುಳು ಕನ್ನಡ ಸಿನಿಮಾ ನಿರ್ಮಾಪಕ ಮಲಾರುಬೀಡು ಪುಷ್ಪರಾಜ ರೈ, ಸಮಾಜ ಸೇವಕ ಮಾಡ ಹರೀಶ್ ಶೆಟ್ಟಿ, ಸಾವಯವ ಕೃಷಿಕ ಕೇಪು ಕೃಷ್ಣಪ್ಪ ಪುರುಷ, ಆರಕ್ಷಕ ಸೇವೆಯ ನಡುಕೂಟೇಲು ಪ್ರವೀಣ್ ರೈ ಹಾಗೂ ಕೃಷಿ ಕ್ಷೇತ್ರದ ಎಡಮಂಗಲ ಸೀತಮ್ಮ ಹಾಲೇಶ್ ಗೌಡ ಅವರನ್ನು ತುಳು ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮ್ಮೇಳನ ಪೂರ್ವದಲ್ಲಿ ತುಳು ಜಾನಪದ ಪರಿಚಯಿಸುವ ಆಕರ್ಷಕ ಮೆರವಣಿಗೆ ನಡೆಯಿತು. ನಿತ್ಯಶ್ರೀ ರೈ ಪ್ರಾರ್ಥನೆ ಹಾಡಿದರು. ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಡಾ ವಸಂತ ಕುಮಾರ್ ಪೆರ್ಲ ಸ್ವಾಗತಿಸಿ, ಪ್ರಸ್ತಾವನೆಗೈದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ತುಳು ಸಿರಿ ಪುರಸ್ಕೃತರನ್ನು ಪರಿಚಯಿಸಿದರು. ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ ವಂದಿಸಿದರು. ದೇವಿಪ್ರಸಾದ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು.

