ಬಂಟ್ವಾಳ: ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದೆ ಆರು ತಿಂಗಳು ಪೂರೈಸಿದ್ದು, ಆಡಳಿತಾಧಿಕಾರಿಗಳ ದರ್ಬಾರು ಇನ್ನು ಎರಡರಿಂದ ಮೂರು ತಿಂಗಳ ಕಾಲ ಮುಂದುವರಿಯುವ ಲಕ್ಷಣಗಳಿವೆ. ರಾಜ್ಯದ ವಿವಿಧ ಜಿಲ್ಲೆಯ ಪುರಸಭೆ, ನಗರಸಭೆಗೆ ಸಂಬಂಧಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕುರಿತ ಮೀಸಲಾತಿಯ ವಿವಾದ ಇನ್ನು ರಾಜ್ಯ ಉಚ್ಚನ್ಯಾಯಾಲಯದಲ್ಲಿ ಇನ್ನು ಇತ್ಯರ್ಥವಾಗದಿರುವುದಿಂದ ಬಂಟ್ವಾಳ ಸಹಿತ ರಾಜ್ಯದ ವಿವಿಧ ಪುರಸಭೆ, ನಗರಸಭೆ, ಪ.ಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಳಂಬವಾಗುವ ಸಾಧ್ಯತೆಗಳೆ ಹೆಚ್ಚು. 2018ರ ಆಗಸ್ಟ್ 31 ರಂದು ರಾಜ್ಯದ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಸೆ.3 ರಂದು ಫಲಿತಾಂಶವು ಪ್ರಕಟವಾಗಿತ್ತು. ಅದೇ ದಿನವೇ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೂ ಸರಕಾರ ಮೀಸಲಾತಿಯನ್ನು ಪ್ರಕಟಿಸಿತ್ತು. ಇದಾದ ಎರಡೆ ದಿನದಲ್ಲಿ ರಾಜಕೀಯ ಕಾರಣಕ್ಕೆಂಬಂತೆ ಬಂಟ್ವಾಳ ಸಹಿತ ರಾಜ್ಯದ ಕೆಲ ಪುರಸಭೆ ಮತ್ತು ನಗರಸಭೆಯ ಅಧ್ಯಕ್ಷರ ಕೆಲ ಉಪಾಧ್ಯಕ್ಷರ ಮೀಸಲಾತಿಯನ್ನು ಸರಕಾರ ಬದಲಾಯಿಸಿತು. ಬಂಟ್ವಾಳ ಪುರಸಭೆಯಲ್ಲಿ ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆಗೆ ಮೀಸಲಾತಿಯನ್ನು ನಿರೀಕ್ಷೆಯಂತೆ ಪ.ಜಾತಿ ಮೀಸಲಿಟ್ಟು ಬದಲಾಯಿಸಲಾಗಿತ್ತು. ಈ ಮೀಸಲಾತಿಗೆ ಕಾಂಗ್ರೆಸ್ ನಿಂದ ಚುನಾಯಿತರಾಗಿದ್ದ ಜನಾರ್ದನ ಚಂಡ್ತಿಮಾರ್ ಅವರೊಬ್ಬರೆ ಅವಕಾಶ ಹೊಂದಿದ್ದರು. ಬಿಜೆಪಿಯ ನೂತನ ಸದಸ್ಯರಾದ ಗೋವಿಂದ ಪ್ರಭು, ವಿದ್ಯಾವತಿ, ಜಯರಾಮ ನಾಯ್ಕ ಅವರು ಬದಲಾದ ಮೀಸಲಾತಿಯನ್ನು ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಹಾಗೆಯೆ ಇತರೆ ಪುರಸಭೆ, ನಗರಸಭೆಯಲ್ಲೂ ನ್ಯಾಯಾಲಯದ ಮೋರೆ ಹೋಗಿದ್ದರು. ವಿಚಾರಣೆಯ ವೇಳೆ ಸರಕಾರ ಮೊದಲು ಪ್ರಕಟಿಸಿದ ಮೀಸಲಾತಿಯನ್ನೇ ಮುಂದುವರಿಸುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರಿಂದ ನ್ಯಾಯಾಲಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ನೀಡಿತ್ತು.ಆದರೆ ಈ ಪ್ರಕ್ರಿಯೇ ಇನ್ನೇನು ಆರಂಭವಾಗುವ ನಿರೀಕ್ಷೆಯಲ್ಲಿದ್ದ ನೂತನ ಸದಸ್ಯರಿಗೆ ಮತ್ತೆ ನಿರಾಶೆ ಉಂಟಾಯಿತು. ಈಗ ಮೀಸಲಾತಿ ರೋಟೆಷನ್ ಮಾದರಿಯಲ್ಲಿ ನಡೆಸಿಲ್ಲ ಎಂಬ ತಗಾದೆಯನ್ನು ಎತ್ತಿ ಕೆಲ ಜಿಲ್ಲೆಯ ಪುರಸಭಾ ಸದಸ್ಯರು ಕೋಟ್೯ ಮೆಟ್ಟಲೇರಿದ್ದಾರೆ. ಹಾಗಾಗಿ ಸದ್ಯ ರಾಜ್ಯದ ಪುರಸಭೆ, ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಬ್ರೇಕ್ ಬಿದ್ದಿದೆ.

ಸರಕಾರಕ್ಕೂ ಇದೇ ಬೇಕಿತ್ತೇ? : ನೂತನವಾಗಿ ಆಯ್ಕೆಗೊಂಡು ಜನರ ಕೆಲಸ ಮಾಡಬೇಕು, ತಮ್ಮ ವಾಡ್೯ನ್ನು ಅಭಿವೃದ್ದಿಪಡಿಸಬೇಕೆಂಬ ಉತ್ಸಾಹದಲ್ಲಿದ್ದ ಸದಸ್ಯರು ಸರಕಾರದ ಎಡವಟ್ಟಿನಿಂದ ಅಧಿಕಾರವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳವಂತಾಗಿದೆ. ಲೋಕಸಭಾ ಚುನಾವಣೆಯವರೆಗೆ ನಗರಸ್ಥಳೀಯಾಡಳಿತ ಸಂಸ್ಥೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇರಬೇಕೆಂಬುದು ಸರಕಾರಕ್ಕೂ ಬೇಕಿರಲಿಲ್ಲ.ಪರಿಣಾಮ ನೂತನ ಸದಸ್ಯರು ಜನಸೇವೆ ಮಾಡಲಾಗದೆ ಸುಮ್ಮನೆ ಕೂರುವಂತಾಗಿದೆ.
ಅಭಿವೃದ್ದಿ ಕುಂಠಿತ: ಆಡಳಿತ ಯಂತ್ರಕ್ಕು ತುಕ್ಕು; ಬಂಟ್ವಾಳ ಪುರಸಭೆಯಲ್ಲು ಕಳೆದ ಆರು ತಿಂಗಳಿನಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ, ಈ ಹಿಂದಿನ ಆಡಳಿತಾವಧಿಯ ಅನುದಾನದ ಕೆಲವೊಂದು ಅಭಿವೃದ್ದಿ ಕಾಮಗಾರಿಗಳ ಹೊರತು ಹೊಸ ಕಾಮಗಾರಿ ಅನುಷ್ಠಾನವಾಗದೆ ಅಭಿವೃದ್ದಿ ಕಾರ್ಯಗಳೇ ಸ್ಥಗಿತಗೊಂಡಿದ್ದರೆ , ಆಡಳಿತ ಯಂತ್ರವನ್ನು ಯಾರು ಕೇಳುವವರೆ ಇಲ್ಲದಂತಾಗಿದೆ. ಅಧಿಕಾರಿಗಳು ಇಲ್ಲಿ ನಡೆದದ್ದೆ ದಾರಿ, ತಾವು ಮಾಡಿದ್ದೆ ಎಲ್ಲವು ಸರಿ ಎಂಬಾಂತಾಗಿದೆ. ನಾಲ್ಕು ತಿಂಗಳ ಹಿಂದೆ ಶಾಸಕ ಯು.ರಾಜೇಶ್ ನಾಯ್ಕ್ ಅವರು ಆಡಳಿತಾಧಿಕಾರಿಯು ಆದ ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರ ಉಪಸ್ಥಿತಿಯಲ್ಲಿ ಪುರಸಭಾಧಿಕಾರಿಗಳ ಸಭೆ ನಡೆಸಿ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ನಡೆಸಿದ್ದರು. ಆದರೆ ಅದಲ್ಲವು ಆ ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಮತ್ತೊಮ್ಮೆ ಪುರಸಭಾವ್ಯಾಪ್ತಿಯಲ್ಲಿರುವ ವಿವಿಧ ಸಮಸ್ಯೆಯ ಪರಿಹಾರಕ್ಕಾಗಿ ಶಾಸಕರು ಪುರಸಭಾಧಿಕಾರಿಗಳ ಸಭೆ ನಿಗದಿ ಪಡಿಸಿದ್ದರಾದರೂ ಕಾರಣಾಂತರದಿಂದ ರದ್ದುಗೊಂಡಿತ್ತು. ಇದೀಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದು ಅಧಿಕಾರಿಗಳ ದರ್ಬಾರಿನ ನಾಗಾಲೋಟಕ್ಕೆ ರಹದಾರಿ ಸಿಕ್ಕಂತಾಗಿದೆ.
ಮಂಡನೆಯಾಗದ ಆಯವ್ಯಯ!: ನಗರ ಸ್ಥಳೀಯಾಡಳಿತ ಸಂಸ್ಥೆ ಮಾರ್ಚ್ಅಂತ್ಯ ದೊಳಗೆ ಮುಂದಿನ ಒಂದು ವರ್ಷದ ಅಯವ್ಯಯವನ್ನು ಮಂಡಿಸಿ ಆಡಳಿತಾತ್ಮಕ ಮಂಜೂರಾತಿಯನ್ನು ಪಡೆಯುವುದು ವಾಡಿಕೆ ,ಆದರೆ ಬಂಟ್ವಾಳ ಪುರಸಭೆಯಲ್ಲಿ ಮುಂದಿನ ಸಾಲಿನ ಅಯವ್ಯಯವನ್ನು ಆಡಳಿತಾಧಿಕಾರಿಯವರು ಈ ವರೆಗೂ ಮಂಡಿಸಿಲ್ಲ. ಅಯ ವ್ಯಯಕ್ಕೆ ಸಂಬಂಧಿಸಿ ನಾಗರಿಕರ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಕೆಲ ಪ್ರಮುಖ ಸಲಹೆಗಳನ್ನು ನೀಡಲಾಗಿತ್ತು.
ಹಿರಿಯ ಸದಸ್ಯರಿಂದ ಆಕ್ಷೇಪ ಸಲ್ಲಿಕೆ : ಈ ನಡುವೆ ಕಳೆದ ಎರಡು ಸಾಲಿನ ಅಯವ್ಯಯದಲ್ಲಿ ಕೋಟ್ಯಾಂತರ ರೂ.ವ್ಯತ್ಯಾಸ ಕಂಡು ಬಂದಿದ್ದು, ಹಣಕಾಸು ಲೆಕ್ಕಾಚಾರದಲ್ಲಿ ಅವ್ಯವಹಾರ ನಡೆದಿರುವ ಹಿನ್ನಲೆಯಲ್ಲಿ ಈ ಹಿಂದಿನ ಹಣಕಾಸಿನಲ್ಲಾಗಿರುವ ವ್ಯತ್ಯಾಸವನ್ನು ಸರಿಪಡಿಸದೆ ಈ ಸಾಲಿನ ಅಯವ್ಯಯವನ್ನು ಮಂಡಿಸುವುದಕ್ಕೆ ಹಿರಿಯ ಸದಸ್ಯ ಗೋವಿಂದಪ್ರಭು ಅವರು ಮುಖ್ಯಾಧಿಕಾರಿ ರೇಖಾ ಶೆಟ್ಟಿ,ಆಡಳಿತಾಧಿಕಾರಿ ರವಿಚಂದ್ರ ನಾಯಕ್ ಹಾಗೂ ಶಾಸಕ ಯು.ರಾಜೇಶ್ ನಾಯ್ಕ್ ಅವರಿಗೂ ಲಿಖತ ಆಕ್ಷೇಪ ಪತ್ರ ಸಲ್ಲಿಸಿದ್ದಾರೆ. ಸದಸ್ಯರಿಗೆ ಸಾಮಾನ್ಯ ಸಭೆಯಲ್ಲಿ ನೀಡಲಾಗುವ ಜಮಾ, ಖರ್ಚಿನ ಲೆಕ್ಕಕ್ಕೂ ಕಳೆದ ಎರಡು ಅವಧಿಯಲ್ಲಿ ಮಂಡಿಸಲಾದ ಅಯವ್ಯದಲ್ಲಿ ಕೋಟ್ಯಾಂತರ ರೂ.ವ್ಯತ್ಯಾಸ ಕಂಡು ಬಂದಿದೆ.ಜಿಲ್ಲಾಧಿಕಾರಿ, ಸರಕಾರದ ಮುಖ್ಯಕಾರ್ಯದರ್ಶಿಯವರಿಗೂ ಈ ಬಗ್ಗೆ ದೂರು ಸಲ್ಲಿಕೆಯಾಗಿತ್ತಲ್ಲದೆ, ಕಳೆದ ವಿಧಾನಮಂಡಲ ಅಧಿವೇಶನದಲ್ಲೂ ಶಾಸಕರು ಈಬಗ್ಗೆ ಲಿಖಿತ ಪ್ರಶ್ನೆಯನ್ನು ಕೇಳಿದ್ದರು. ಆದರೆ ಪುರಸಭೆ ಮಾತ್ರ ಸಮರ್ಥಿಸಿಕೊಂಡಿತ್ತು. ಇದೀಗ ಮತ್ತೆ ಪ್ರಕರಣ ಮರುಜೀವ ಪಡೆದಿದ್ದು, ಹಿಂದಿನ ಅಯವ್ಯಯದಲ್ಲಿ ಆಗಿರುವ ಹಣಕಾಸಿನ ವ್ಯತ್ಯಾಸದ ಕುರಿತು ಸ್ಪಷ್ಟತೆ ನೀಡುವಂತೆ ಆಡಳಿತಾಧಿಕಾರಿವರನ್ನು ಹಿರಿಯ ಸದಸ್ಯ ಗೋವಿಂದಪ್ರಭು ಕೋರಿರುವುದರಿಂದ ಆಡಳಿತಾಧಿಕಾರಿ ಅಡಕತ್ತರಿಗೆ ಸಿಲುಕಿದ್ದಾರೆ. ಈ ಕುರಿತಂತೆ ಒಂದಷ್ಟು ಮಾಹಿತಿಯನ್ನು ಅವರು ಕಲೆಹಾಕಿದ್ದಾರೆಂದು ತಿಳಿದುಬಂದಿದೆ.
ಹೊಸ ಜಿಜ್ಞಾಸೆ: ಲೋಕಸಭೆ,ವಿಧಾನಸಭೆ ಸಹಿತ ಯಾವುದೇ ಸ್ಥಳೀಯಾಡಳಿತ ಸಂಸ್ಥೆ ಗೆ ಸದಸ್ಯರೊಬ್ಬರಿಂದ ಕಾರಣಾಂತರದಿಂದ ಖಾಲಿಯಾದರೆ ಮುಂದಿನ 6ತಿಂಗಳ ಒಳಗಾಗಿ ತೆರವಾದ ಆಸ್ಥಾನಕ್ಕೆ ಚುನಾವಣೆ ನಡೆಯಬೇಕಾಗುತ್ತದೆ.ಇದನ್ನು ಕಾಯ್ದೆ ಹೇಳುತ್ತದೆ.ಆದರೆ ಚುನಾವಣಾ ಪ್ರಕ್ರಿಯೆ ಪೂರ್ಣ ಗೊಂಡು ಫಲಿತಾಂಶ ಪ್ರಕಟವಾಗಿ ಆರುತಿಂಗಳು ಕಳೆದರೂ ಚುನಾಯಿತಪ್ರತಿನಿಧಿಗಳಿಗೆ ಅಧಿಕಾರ ಸಿಗದೆ ಇರುವುದರಿಂದ ಮತ್ತೆ ಮರು ಚುನಾವಣೆ ನಡೆಯಬಹುದೇ ಎಂಬ ಹೊಸದಾದ ಜಿಜ್ಞಾಸೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.