ಬಂಟ್ವಾಳ: ಸಂವಿಧಾನವೆಂದರೆ ದೇಶದ ನಿಯಮ ಸಂಹಿತೆಯಾಗಿದೆ. ನಮ್ಮ ಭಾರತದ ಸಂವಿಧಾನ ರಚನೆಗಾಗಿ ಅದರ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರು ಜಾಗತಿಕ ಮಟ್ಟದಲ್ಲಿ ಬೇರೆ ಬೇರೆ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಒಂದು ಸುಧೀರ್ಘವಾದ ಅತ್ಯುತ್ತಮ ಸಂವಿಧಾನವನ್ನು ಕೊಡುಗೆಯನ್ನಾಗಿ ಕೊಟ್ಟಿರುವರು. ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಹಕ್ಕು, ಕರ್ತವ್ಯ ಇತ್ಯಾದಿಗಳ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಲಾಗಿರುವ ಸಂವಿಧಾನದ ಅಡಿಯಲ್ಲೇ ದೇಶದ ಜನತೆ ನಡೆಯಬೇಕಾಗಿರುವುದರಿಂದ ಪ್ರತಿಯೊಬ್ಬರೂ ಅದನ್ನು ಅರಿತುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳಂತೂ ಸಂವಿಧಾನವನ್ನು ಕಲಿತು ತಿಳಿದುಕೊಳ್ಳುವುದರೊಂದಿಗೆ ದಿನನಿತ್ಯ ಪತ್ರಿಕೆಗಳ ಓದು-ಹಕ್ಕು ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕು ಎಂಬುದಾಗಿ ಬಂಟ್ವಾಳ ವಿಭಾಗದ ಎಎಸ್ಪಿ ರಂಜಿತ್ಕುಮಾರ್ ಹೇಳಿದರು.
ಅವರು ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಮತ್ತು ತುಂಬೆ ಪದವಿ ಪೂರ್ವ ಕಾಲೇಜು ಜಂಟಿಯಗಿ ಏರ್ಪಡಿಸಿದ್ದ ಸಂವಿಧಾನ ದಿನ ಜಾಗೃತಿ ಕಾರ್ಯಗಾರದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂವಿಧಾನ ಕತೃ ಡಾ| ಬಿ.ಆರ್.ಅಂಬೇಡ್ಕರ್ ಅವರ ಪುಸ್ತಕ ನೀಡುವ ಮೂಲಕ ಎಎಸ್ಪಿ ರಂಜಿತ್ ಕುಮಾರ್ ಅವರನ್ನು ಗೌರವಿಸಲಾಯಿತು. ಕಛೇರಿ ಅಧೀಕ್ಷಕ ಅಬ್ದುಲ್ ಕಬೀರ್ ಮುಂತಾದವರು ಉಪಸ್ಥಿತರಿದ್ದರು.
ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪನ್ಯಾಸಕ ಅಬ್ದುಲ್ ರಹಿಮಾನ್ ಡಿ.ಬಿ. ವಂದಿಸಿದರು. ಉಪನ್ಯಾಸಕಿ ಕವಿತಾ ಕೆ. ಕಾರ್ಯಕ್ರಮ ನಿರೂಪಿಸಿದರು.

