ಬಂಟ್ವಾಳ : ಪುರಸಭಾ ವ್ಯಾಪ್ತಿಯಲ್ಲಿ ತೆರಿಗೆಯ ಜೊತೆಗೆ ಕಸ ಸಂಗ್ರಹದ ಶುಲ್ಕವನ್ನು ವಸೂಲಿ ಮಾಡುವ ಜನವಿರೋಧಿ ನೀತಿಯನ್ನು ಕೈ ಬಿಡುವಂತೆ ಆಗ್ರಹಿಸಿ ಮಾಜಿ ಸಚಿವ ರಮಾನಾಥ ರೈ ನೇತೃತವದ ನಿಯೋಗ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ವಾಸದ ಮನೆ ಮತ್ತು ವಾಣಿಜ್ಯ ಕಟ್ಟಡಗಳ ತೆರಿಗೆ ಪಾವತಿಯ ಸಂದರ್ಭದಲ್ಲಿ ಕಸ ಸಂಗ್ರಹಣೆ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲು ಮಾಡುವುದು ತೀರಾ ಜನವಿರೋಧಿ ಕ್ರಮವಾಗಿದೆ. ಕಸ ಸಂಗ್ರಹಣೆಯ ಸೇವೆಯನ್ನು ಬಳಸದಿರುವ ನಗರವಾಸಿಗಳಿಗೆ ತೆರಿಗೆ ಪಾವತಿಸಲು ಒತ್ತಾಯ ಹೇರುತ್ತಿರುವ ವಿರುದ್ದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಕಸ ಸಂಗ್ರಹಣಾ ತೆರಿಗೆ ವಸೂಲು ಮಾಡುವುದನ್ನು ಪುರಸಭೆಯ ಚುನಾಯಿತ ಪ್ರತಿನಿಧಿಗಳ ಆಡಳಿತ ಬರುವ ತನಕ ತಕ್ಷಣದಿಂದ ತಡೆಹಿಡಿಯುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯಾತ್ ಉಪಾಧ್ಯಕ್ಷ ಅಬ್ಬಾಸ್ ಅಲಿ,ಪುರಸಭಾ ಸದಸ್ಯರಾದ ಮಹಮ್ಮದ್ ನಂದರಬೆಟ್ಟು., ಜನಾರ್ದನ ಚೆಂಡ್ತಿಮಾರ್ ,ಮಹಮ್ಮದ್ ಶೆರೀಫ್, ಲೋಲಾಕ್ಷ ಶೆಟ್ಟಿ, ಗಂಗಾಧರ ಪೂಜಾರಿ, ಮುಖಂಡರಾದ ಶಬೀರ್ ಸಿದ್ದಕಟ್ಟೆ ಉಪಸ್ಥಿತರಿದ್ದರು.
