ಬಂಟ್ವಾಳ: ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದ್ದು, ಸೂಕ್ತ ಸಮಯದಲ್ಲಿ ತರಬೇತಿಗಳನ್ನು ಪಡೆದುಕೊಂಡು ಐಚ್ಛಿಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಹೇಳಿದ್ದಾರೆ.
ಅವರು ಬಂಟ್ವಾಳ ಸರಕಾರಿ ಪ್ರಥಮ ಕಾಲೇಜು ಹಾಗೂ ರೋಟರಿ ಕ್ಲಬ್, ವೃತ್ತಿ ಮಾರ್ಗದರ್ಶನ ಕೋಶ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ ಬಿ.ಸಿ.ರೋಡ್ ರೋಟರಿ ಕ್ಲಬ್ ಬಂಟ್ವಾಳ ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕಿನ ವಿವಿಧ ಕಾಲೇಜುಗಳ ಪದವಿ ವಿದ್ಯಾರ್ಥಿಗಳಿಗೆ ಸಂದರ್ಶನ ಹಾಗೂ ವೃತ್ತಿ ಕೌಶಲ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಭಟ್ ಅಜೆಕಳ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ರಾಷ್ಟ್ರೀಯ ತರಬೇತುದಾರ ಟಿ. ಕೃಷ್ಣಮೂರ್ತಿ ಉಜಿರೆ ಸಂದರ್ಶನ ಕಲೆಯ ಬಗ್ಗೆ ತರಬೇತಿ ನೀಡಿದರು. ಹಿರಿಯ ಉಪನ್ಯಾಸಕ ಪ್ರೊ. ಸತೀಶ್ ಗಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ನಂದಕಿಶೋರ್ ಸ್ವಾಗತಿಸಿದರು, ಲಿಖಿತ ನಿರೂಪಿಸಿ ಧನುಷ್ ವಂದಿಸಿದರು.