ವಿಟ್ಲ: ವಿಟ್ಲದ ಶ್ರೀ ಭಗವತೀ ದೇವಸ್ಥಾನದಲ್ಲಿ ಯಕ್ಷ ಸಿಂಧೂರ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುವ ’ಅಭ್ಯಾಸೀ ಯಕ್ಷಗಾನ ತಾಳಮದ್ದಳೆ’ ಕೂಟವನ್ನು ಯಕ್ಷಭಾರತದ ಅಧ್ಯಕ್ಷ ಸಂಜೀವ ಪೂಜಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ಭಟ್ ‘ಕಳೆದ 9 ವರ್ಷಗಳಿಂದ ಯಕ್ಷ ಶಿಕ್ಷಣ ಧ್ಯೇಯವುಳ್ಳ ಯಕ್ಷ ಸಿಂಧೂರ ಸಂಘಟನೆಯ ಮೂಲಕ ಹಿಮ್ಮೇಳ, ಮುಮ್ಮೇಳದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ತರಬೇತಿ ಪಡೆದ ಮೂರು ಮಂದಿ ವಿದ್ಯಾರ್ಥಿಗಳದೀಗಾಗಲೇ ರಂಗ ಪ್ರವೇಶ ಮಾಡಿದ್ದಾರೆ.
ಭಗವತಿ ದೇವಸ್ಥಾನದ ಉಸ್ತುವಾರಿ ಕೇಶವ ವಿಟ್ಲ ಹಾಗೂ ನಾರಾಯಣ ಕಾಯರ್ಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಕಲಾವಿದರಿಂದ ’ಪಾರ್ಥ ಸಾರಥ್ಯ’ ತಾಳಮದ್ದಳೆ ನಡೆಯಿತು. ಭಾಗವತಿಕೆಯಲ್ಲಿ ಪ್ರಭಾ ಹರೀಶ್ ಬಾಳೆಕಾನ ಮತ್ತು ಧನ್ಯಶ್ರೀ ಚಣಿಲ, ಚೆಂಡೆ ಮದ್ದಳೆಯಲ್ಲಿ ಅವಿನಾಶ್ ಚಣಿಲ, ಕೃಷ್ಣಪ್ರಸಾದ್ ದಿವಾಣ ಮತ್ತು ಅಕ್ಷರಶ್ಯಾಮ ಮಳಿ, ಮುಮ್ಮೇಳದಲ್ಲಿ ಚಣಿಲ ಸುಬ್ರಹ್ಮಣ್ಯ ಭಟ್, ಎಲ್ ಎನ್ ಭಟ್ ಮಳಿ, ಪೂರ್ಲಪ್ಪಾಡಿ ಈಶ್ವರ ಭಟ್, ಮಂಜುನಾಥ ಆಚಾರ್ಯ, ರಾಧಾಕೃಷ್ಣ ವೈ, ಸಂಕಪ್ಪ ಗೌಡ, ಸೀತಾಲಕ್ಷ್ಮಿ ವರ್ಮ, ಅಭಿಲಾಷ್ ಮತ್ತು ಶ್ರೀಕೃಷ್ಣ ಸಹಕರಿಸಿದರು.














