ಜೇಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಏಪ್ರಿಲ್ 22 ರಿಂದ 27ರ ವರೆಗೆ ಮಕ್ಕಳ ಬೇಸಿಗೆ ಶಿಬಿರ ವಿಕಸನ ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನ ಬಸವ ಮಂಟದಲ್ಲಿ ಏಪ್ರಿಲ್ 22ರಂದು ಉದ್ಘಾಟನೆಗೊಂಡಿತು. ಜೇಸಿಐ ಅದ್ಯಕ್ಷ ಮಾತಶ್ರೀ ಜಯಲಕ್ಷ್ಮಿ ವಿ. ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಝಂಭಾ ವ್ಯಾಯಾಮ ತರಬೇತಿ, ಯೋಗಾಸನ, ಪ್ರಾಣಾಯಾಮ ತರಬೇತಿ, ಸ್ವಚ್ಚ ಪರಿಸರ ಮತ್ತು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಪ್ರಾತ್ಯಕ್ಷಿಕೆ, ಚಿತ್ರಕಲೆ, ಕ್ರಾಪ್ಟ್ ತರಬೇತಿ, ಮುಖವಾಡ, ಗಾಳಿಪಟ ತಯಾರಿಕಾ ತರಬೇತಿ, ನಾಟಕ ರಂಗ ಕಲಾ ತರಬೇತಿ ಹೀಗೆ ಹಲವಾರು ತರಬೇತಿ ಕಾರ್ಯಕ್ರಮಗಳು ನಡೆದವು.

ರಮ್ಯಶ್ರೀ, ರಾಜಮಣಿ ರಾಮಕುಂಜ, ಮುರಳಿಕೃಷ್ಣ, ಮುರಳೀಧರ ಆಚಾರ್, ಮೂರ್ತಿ ದೇರಾಜೆ ಮುಂತಾದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ತರಬೇತಿ ನೀಡಿದರು.
ತಾ. 27ರಂದು ಶಿಬಿರದ ಸಮಾರೋಪ ಸಮಾರಂಭ ಮತ್ತು ಭೂ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸುಜಾತಾ ರವಿಶಂಕರ್, ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಂಜನಪದವು ಇವರು ಆಗಮಿಸಿದ್ದರು. ಮರಗಿಡಗಳನ್ನು ಕಡೆಯದೇ ಹೊಸ ಹೊಸ ಗಿಡ ಮರಗಳನ್ನು ನೆಡುವುದರೊಂದಿಗೆ ತಮ್ಮ ಪರಿಸರವನ್ನು ಸ್ವಚ್ಚವಾಗಿರಿಸಲು ಮಕ್ಕಳಲ್ಲಿ ಈಗಿಂದಲೇ ಜ್ಞಾನವನ್ನು ತುಂಬಿದರೆ ಮುಂದೆ ಆಗುವಂತಹ ಅಪಾಯಕಾರಿ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಕರೆ ನೀಡಿದರು. ಜೇಸಿ ಅಧ್ಯಕ್ಷ ಹರ್ಷರಾಜ್ ಸಿ ಅಧ್ಯಕ್ಷತೆ ವಹಿಸಿದ್ದರು. ಸುಮಾರು 25ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದರು. ನಂತರ ಮಕ್ಕಳಿಗೆ ಭಾಗವಹಿಸದ ಪ್ರಮಾಣಪತ್ರ ನೀಡಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕಿ ಹಾಗು ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್, ಜೇಜೇಸಿ ಅಧ್ಯಕ್ಷ ರೊನಿತ್ ಬಿ.ಜಿ ಉಪಸ್ಥಿತರಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.