ಸುಳ್ಯ: ತುಳುನಾಡಿನ ಆಚರಣೆಗಳಲ್ಲಿ ಮಹತ್ವದ ಸ್ಥಾನಪಡೆದಿರುವ ದೈವಾರಾಧನೆ ಕುರಿತು ವಿದ್ಯಾರ್ಥಿಗಳು ಅಧ್ಯಯನ ಕೈಗೊಳ್ಳುವುದು ಪ್ರಶಂಸನೀಯ ಎಂದು ಸುಳ್ಯ ಎನ್. ಎಂ .ಸಿ. ಕಾಲೇಜಿನ ಪ್ರಾಧ್ಯಾಪಕ ಡಾ. ಪೂವಪ್ಪ ಕಣಿಯೂರು ಹೇಳಿದರು.

ಇಂಡಿಯ ಫೌಂಡೇಶನ್ ಫಾರ್ ದಿ ಆರ್ಟ್ಸ್ ಬೆಂಗಳೂರು ಹಾಗೂ ಡಿ.ಎಸ್.ಇ ಆರ್.ಟಿ ಬೆಂಗಳೂರು ಇದರ ಸಹಯೋಗದಲ್ಲಿ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡ ಕಲಿ-ಕಲಿಸು ಯೋಜನೆಯ ಶಿಕ್ಷಣದಲ್ಲಿ ಕಲಾಂತರ್ಗತ ಪ್ರಯೋಗ “ನನ್ನ ಮನೆಯ ಭೂತದ -ಒಂದು ಅಧ್ಯಯನ” ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ದೈವಿಕ ಭಾವದೊಂದಿಗೆ ನಡೆಯುವ ಭೂತಾರಾಧನೆಯನ್ನು ವಿದ್ಯಾರ್ಥಿಗಳು ಯಾವ ಬಗೆಯಲ್ಲಿ ಅಧ್ಯಯನ ನಡೆಸಬೇಕೆಂದು ಕಿವಿಮಾತು ಹೇಳಿದ ಅವರು, ಪ್ರತಿಯೊಬ್ಬರೂ ಅಧ್ಯಯನ ಶೀಲ ಮನಸ್ಸಿನೊಂದಿಗೆ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರಕಾಶ ಮೂಡಿತ್ತಾಯರು ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಜೊತೆಯಲ್ಲಿ ಇಂತಹ ಕಲಿಕೆಗೆ ಅವಕಾಶಗಳು ಸಿಕ್ಕಾಗ ತಮ್ಮನ್ನು ತಾವು ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ಐಎಫ್ಎ ಯಂತಹಾ ಸಂಸ್ಥೆಯ ಈ ಯೋಜನೆಗೆ ನಮ್ಮ ವಿದ್ಯಾಸಂಸ್ಥೆ ಆಯ್ಕೆಯಾಗಿರುವುದು ಸಂತಸ ತಂದಿದೆ, ಸರ್ವರ ಸಹಕಾರದೊಂದಿಗೆ ಯೋಜನೆ ಯಶಸ್ವಿಯಾಗಲಿ ಎಂದರು. ನನ್ನ ಮನೆಯ ಭೂತ- ಒಂದು ಅಧ್ಯಯನ ಯೋಜನೆಯ ಮಾರ್ಗದರ್ಶಿ ಶಿಕ್ಷಕಿ ಶ್ರೀಮತಿ ಮಮತಾ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗಣಿತ ಶಿಕ್ಷಕಿ ಪೂರ್ಣಿಮಾ ವಂದಿಸಿದರು. ವಿಜ್ಞಾನ ಶಿಕ್ಷಕ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.