ಸುಳ್ಯ: ಇಲ್ಲಿನ ವಸತಿ ಗೃಹದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವಕ ಮತ್ತು ಯುವತಿಯ ಶವ ಕಂಡುಬಂದಿದ್ದು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


ಸುಳ್ಯ ತಾಲೂಕಿನ ಐವರ್ನಾಡಿನ ಕಟ್ಟತ್ತಾರು ನಿವಾಸಿ ತಿಮ್ಮಪ್ಪ ಗೌಡರ ಪುತ್ರ ದರ್ಶನ್(19) ಹಾಗೂ ಧರ್ಮಸ್ಥಳ ಸಮೀಪ ನಾರ್ಯ ಕಲ್ಕಜೆಯ ಶೇಷಪ್ಪ ಎಂಬುವವರ ಪುತ್ರಿ ಇಂದಿರಾ(19) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ.
ಈ ಯುವ ಜೋಡಿ ವಸತಿ ಗೃಹದಲ್ಲಿ ತಂಗಿದ್ದು, ಆ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಸತಿ ಗೃಹದ ಸಿಬ್ಬಂದಿ ಕಿಟಕಿ ಮೂಲಕ ನೋಡಿದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣವೇ ವಸತಿ ಗೃಹದವರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯುವಕನ ಮನೆಯವರು ಈಗಾಗಲೇ ಸ್ಥಳಕ್ಕಾಗಮಿಸಿದ್ದು, ಯುವತಿಯ ಕುಟುಂಬಸ್ಥರು ಬಂದ ಬಳಿಕ ವಸತಿ ಗೃಹದ ಬಾಗಿಲು ತೆಗೆಯಲು ನಿರ್ಧರಿಸಲಾಗಿದೆ.
ಪ್ರೀತಿಗೆ ನಿರಾಕರಿಸಿದಕ್ಕೆ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.












