ಪುತ್ತೂರು: ಎಸೆಸೆಲ್ಸಿ ಅಂತಿಮ ಪರೀಕ್ಷೆ ಮಾ. 25ರಿಂದ ಎ. 6ರ ತನಕ ನಡೆಯಲಿದ್ದು, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಪರೀಕ್ಷಾ ಕೇಂದ್ರಗಳನ್ನು ರದ್ದುಪಡಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ಸಾಮರ್ಥ್ಯಕ್ಕೆ ತಕ್ಕಂತೆ ಪರೀಕ್ಷಾರ್ಥಿಗಳ ಸಂಖ್ಯೆ ಇಲ್ಲದಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ನಿಯಮ ಪ್ರಕಾರ ಇಲಾಖೆ ಕ್ರಮ ಕೈಗೊಂಡಿದೆಯಾದರೂ, ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಜಿಲ್ಲೆಯಲ್ಲಿ 2023ರಲ್ಲಿ 98 ಪರೀಕ್ಷಾ ಕೇಂದ್ರಗಳಿದ್ದವು. ಈ ಬಾರಿ 88ಕ್ಕೆ ಇಳಿದಿದೆ. ಬಂಟ್ವಾಳ ತಾಲೂಕಿನಲ್ಲಿ 1, ಪುತ್ತೂರು 2, ಬೆಳ್ತಂಗಡಿ 1, ಮಂಗಳೂರು ಉತ್ತರ 2, ಮಂಗಳೂರು ದಕ್ಷಿಣದಲ್ಲಿ 7 ಕೇಂದ್ರಗಳನ್ನು ರದ್ದುಪಡಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ 1, ಮಂಗಳೂರು ಉತ್ತರ 1, ಮಂಗಳೂರು ದಕ್ಷಿಣದಲ್ಲಿ 1 ಹೊಸ ಕೇಂದ್ರ ತೆರೆಯಲಾಗಿದೆ. ಒಟ್ಟು 13 ಕೇಂದ್ರ ರದ್ದುಪಡಿಸಿ 3 ಹೊಸ ಕೇಂದ್ರ ತೆರೆಯಲಾಗಿದೆ.
ಇಲಾಖೆಯ ನಿಯಮಾನುಸಾರ ಪರೀಕ್ಷಾ ಕೇಂದ್ರಗಳಲ್ಲಿ 250 ವಿದ್ಯಾರ್ಥಿಗಳು ಇರಬೇಕು. ಕನಿಷ್ಟ 180 ರಿಂದ 200 ವಿದ್ಯಾರ್ಥಿಗಳಾದರೂ ಇರಲೇಬೇಕು ಆದರೆ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳ ಸಂಖ್ಯೆ ಇರುವ ಪರೀಕ್ಷಾ ಕೇಂದ್ರಗಳನ್ನು ಅನಿವಾರ್ಯವಾಗಿ ರದ್ದು ಪಡಿಸಬೇಕಾಗುತ್ತದೆ ಹಾಗಾಗಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣ , ಉಳ್ಳಾಲ ವಲಯಗಳು ಸೇರಿದಂತೆ ಒಟ್ಟು 13 ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ರದ್ದು ಪಡಿಸಲಾಗಿದ್ದು, ವಿದ್ಯಾರ್ಥಿಗಳು ಹತ್ತಾರು ಕಿಲೋಮೀಟರ್ ವರೆಗೆ ಕ್ರಮಿಸಿ ಪರೀಕ್ಷೆ ಬರೆಯುವಂತ ಸ್ಥಿತಿ ಎದುರಾಗಿದೆ.