ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ನಾಯಿಲ, ಕೋಮೆ ಹಾಗೂ ನರಿಕೊಂಬು ಗ್ರಾಮದ ಏಲಬೆ ಪ್ರದೇಶದಲ್ಲಿ ನಡೆಸುತ್ತಿರುವ ಕಲ್ಲಿನ ಕೋರೆಯಿಂದ ತೊಂದರೆಯಾಗುತ್ತಿದ್ದು, ಇಂದು ಬೆಳಗ್ಗೆ ಕೋರೆಯಲ್ಲಿ ಸ್ಟೋಟಕ ಬಳಸಿದ ಪರಿಣಾಮ ಸ್ಥಳೀಯ ಮನೆಯೊಂದಕ್ಕೆ ಕಲ್ಲು ಬಿದ್ದು ಹಾನಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರಿಗೆ ದೂರು ನೀಡಿದ್ದಾರೆ.


ಬೆಳಗ್ಗೆ 10.15ರ ಸುಮಾರಿಗೆ ಗೀತಾ ಅವರ ಮನೆಯ ಮೇಲೆ ಕಲ್ಲು ಬಿದ್ದು ಶೀಟ್ಗೆ ಹಾನಿಯಾಗಿದೆ. ಗಣಿಗಾರಿಕೆಯ ಸಂದರ್ಭ ಸ್ಪೋಟಕಗಳನ್ನು ಬಳಸುತ್ತಿರುವುದರಿಂದ ಅನೇಕ ಮನೆಗಳಲ್ಲಿ ಬಿರುಕು ಬಿಟ್ಟಿದೆ. ಜತೆಗೆ ಕಲ್ಲಿನ ತುಂಡುಗಳು ಸುಮಾರು 500 ಮೀ.ದೂರದವರೆಗೂ ಬೀಳುತ್ತಿದೆ.
ಕಲ್ಲಿನ ಚೂರು-ಧೂಳು ಮನೆಗಳು, ಕೃಷಿ ಜಮೀನಿನ ಮೇಲೆ ಬಿದ್ದು ಹಾನಿಯಾಗುತ್ತಿದೆ. ಇದರಿಂದ ಕೃಷಿ ಹಾನಿಯ ಜತೆಗೆ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋರೆಯಿಂದ ಇನ್ನಷ್ಟು ಹಾನಿಯಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ಅದರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ ಬಂಟ್ವಾಳ ಪೊಲೀಸರಿಗೂ ಈ ಕುರಿತು ದೂರು ನೀಡಿದ್ದಾರೆ.

