ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಉದ್ಯೋಗ ಭರವಸೆ ಕೋಶ ಹಾಗೂ ಮಹಿಳಾ ಜಾಗೃತಿ ವೇದಿಕೆಇವುಗಳ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ ಮಹಿಳಾ ಕಾನೂನು ಅರಿವು ಹಾಗೂ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶಗಳು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗುಲಾಬಿ ಶೆಟ್ಟಿ ಅಧ್ಯಕ್ಷರು ಸಂಗಬೆಟ್ಟು ಗ್ರಾಮ ಪಂಚಾಯತ್ ಇವರು ಮಾಹಿತಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಕೋರಿದರು.
ಸೌಮ್ಯ ಉಪನಿರೀಕ್ಷರು, ಆರಕ್ಷಕ ಠಾಣೆ ಪುಂಜಾಲಕಟ್ಟೆ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ನಿರಂತರ ಅಭ್ಯಾಸ ನಿರ್ದಿಷ್ಟ ಗುರಿ ಹಾಗೂ ಪರಿಶ್ರಮ ವಿದ್ಯಾರ್ಥಿ ಜೀವನವನ್ನು ಯಶಸ್ವಿಯಾಗಿಸುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಪೋಲಿಸ್ ಇಲಾಖೆಯಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಮಾಹಿತಿ, ಪರೀಕ್ಷೆಗೆ ತಯಾರಿ, ದಾಖಲೆಗಳ ಅವಶ್ಯಕತೆ ಹಾಗೂ ವಿದ್ಯಾರ್ಹತೆಗಳ ಬಗ್ಗೆ ಮಾಹಿತಿ ನೀಡಿದರು. ಇಂದಿನ ಯುವಪೀಳಿಗೆ ಹಾಗೂ ವಿದ್ಯಾರ್ಥಿ ಜೀವನಕ್ಕೆ ಅಡ್ಡಿಯಾಗಿರುವ ಮಾದಕ ದ್ರವ್ಯ ಮತ್ತು ಅದರ ದುಷ್ಪರಿಣಾಮಗಳ ಕುರಿತು ತಮ್ಮ ಅನುಭವದ ಮಾತುಗಳನ್ನಾಡಿದರು. ಮಹಿಳೆಯರು ಮನೆಯ ಒಳಗೆ ಮತ್ತು ಹೊರಗೆ ಎದುರಿಸುವ ದೌರ್ಜನ್ಯಗಳು ಹಾಗೂ ಅದರ ವಿರುದ್ದ ಇರುವ ರಕ್ಷಣೆ ಮತ್ತು ಕಾನೂನುಗಳ ಮಾಹಿತಿ ನೀಡಿದರು. ಹದಿಹರೆಯದ ಆಕರ್ಷಣೆಗಳು ಭವಿಷ್ಯದ ಜೀವನವನ್ನು ಹಾಳು ಮಾಡದಂತೆ ಜಾಗೃತಿ ವಹಿಸಲು ಸೂಚಿಸಿದರು.
ಪ್ರಭಾಕರ ಪ್ರಭು ಸದಸ್ಯರು ತಾಲೂಕು ಪಂಚಾಯತ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರೊ. ಸತ್ಯನಾರಾಯಣ ಭಟ್, ಪ್ರಾಂಶುಪಾಲರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಇಂದಿನ ಮಾಹಿತಿ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಭವಿಷ್ಯದ ಕನಸುಗಳಿಗೆ ಹಾಗೂ ನನಸಾಗಿಸುವ ಪ್ರಯತ್ನಗಳಿಗೆ ಪ್ರೇರಣೆಯಾಗಲಿ ಎಂದರು. ವಿದ್ಯಾರ್ಥಿಗಳಿಗೆ ವಿನೂತನ ಕಾರ್ಯಕ್ರಮಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದ ಹಾಗೂ ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ನಮ್ಮ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವುದು ನಮ್ಮ ಆಶಯವಾಗಿದೆ ಎಂದರು.
ಈ ಕಾರ್ಯಕ್ರಮದ ಕುರಿತು ಸೌಮ್ಯ ಹೆಚ್.ಕೆ ಸಂಚಾಲಕರು ಆಂತರಿಕ ಗುಣಮಟ್ಟ ಭರವಸೆ ಕೋಶ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಎನ್ಎಸ್ಎಸ್ ಯೋಜನಾಧಿಕಾರಿ ದೇವಿಪ್ರಸಾದ್ ಇವರು ಸ್ವಾಗತಿಸಿ ಹನುಮಂತಯ್ಯ ಜಿ.ಹೆಚ್ ಸಂಚಾಲಕರು ಉದ್ಯೋಗಭರವಸೆ ಕೋಶ ಇವರು ವಂದಿಸಿದ ಕಾರ್ಯಕ್ರಮವನ್ನು ನಿಶ್ವಿತಾ ದ್ವಿತೀಯ ಬಿಕಾಂ ನಿರ್ವಹಿಸಿ ಮನೀಶ್ ದ್ವಿತೀಯ ಬಿಎ ಪ್ರಾರ್ಥಿಸಿದರು.
