ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅರ್ಥಶಾಸ್ತ್ರ ವಿಭಾಗ ಯೋಜನಾ ವೇದಿಕೆ ವತಿಯಿಂದ ವಿದ್ಯಾರ್ಥಿಗಳ ನಡಿಗೆ ಗದ್ದೆಯ ಕಡೆಗೆ ಎಂಬ ಗದ್ದೆಯಲ್ಲಿ ಬೀಜ ಬಿತ್ತನೆ ಮಾಡುವ ಪ್ರಾಯೋಗಿಕ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಸಮೀಪದ ಕಮಾಲಾಧರ ಶೆಟ್ಟಿಗಾರ್ ವ್ಯವಸಾಯಗಾರರು ಇವರ ಗದ್ದೆಗೆ ತೆರಳಿ ವಿದ್ಯಾರ್ಥಿಗಳಿಗೆ ಬೀಜ ಬಿತ್ತನೆ ಮಾಡುವ ವಿಧಾನವನ್ನು ತಿಳಿಸಲಾಯಿತು. ಸ್ವತಃ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಬೀಜ ಬಿತ್ತುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ನಡಿಗೆ ಗದ್ದೆಯ ಕಡೆಗೆ ಎಂಬ ಘೋಷವಾಕ್ಯದಡಿ ಕೃಷಿಯಲ್ಲಿ ಜರಗುವ ಹಲವಾರು ಕಾರ್ಯಗಳಲ್ಲಿ ಮೊದಲನೆಯದಾದ ಭೂಮಿ ಉಳುವ ಹಾಗೂ ಬೀಜ ಬಿತ್ತುವ ವಿಧಾನವನ್ನು ತೋರಿಸಲಾಯಿತು. ಕೃಷಿಯಿಂದ ವಿಮುಕ್ತರಾಗುತ್ತಿರುವ ಯುವಜನತೆಗೆ ಮರಳಿ ಕೃಷಿಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನು ಮಾಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸತ್ಯನಾರಾಯಣ ಭಟ್, ರಾಷ್ಟ್ರೀಯ ಸೇವಾಯೋಜನಾ ಘಟಕದ ಯೋಜನಾಧಿಕಾರಿಗಳಾದ ಶ್ರೀ ದೇವಿಪ್ರಸಾದ್ ಸಹಾಯಕ ಪ್ರಾಧ್ಯಾಪಕರು ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸೌಮ್ಯ ಹೆಚ್.ಕೆ ಸಹಾಯಕ ಪ್ರಾಧ್ಯಾಪಕರು ಹಾಗೂ ಸುಮಾರು 35 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
