ಬಂಟ್ವಾಳ: ಗುರುಕುಲ ಹಿಂದೆ ಹೇಗಿತ್ತು ಎಂಬುದರ ನಿಜ ದರ್ಶನ ನಮಗಿಂದು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಆಗಿದೆ, ನಮಗೂ ಇಂತಹ ಶಿಕ್ಷಣ ಪಡೆಯುವ ಅವಕಾಶ ಸಿಗಬೇಕಿತ್ತು ಎಂದು ಬಂಟ್ವಾಳ ತಾಲೂಕಿನ ತಹಶೀಲ್ದಾರ್ ರಶ್ಮಿ ಎಸ್.ಆರ್. ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇದ್ದೇ ಇದೆ, ನಾವಿಂದು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವತ್ತ ಗಮನಹರಿಸಬೇಕಿದೆ. ನಾವೇನು ಕೆಲಸ ಮಾಡುತ್ತೇವೋ ಅದನ್ನು ಇಚ್ಚೆಯಿಂದ ಮಾಡಿದಾಗ ಮಾತ್ರ ಪ್ರತಿಫಲ ಸಿಗುತ್ತದೆ. ಬದುಕಿನ ಯಾವ ಸಮಯದಲ್ಲೂ ವಿಶ್ವಾಸ ಕಳೆದುಕೊಳ್ಳದೆ ಪೂರ್ಣ ಪ್ರಯತ್ನದಿಂದ ಕೆಲಸ ಮಾಡಿದಾಗ ವೈಫಲ್ಯತೆ ಎಂಬುದು ಎದುರಾಗುವುದಿಲ್ಲ. ಈ ರೀತಿ ಸಾಧನೆಯ ಹಾದಿಯಲ್ಲಿ ಮುನ್ನಡೆಯಿರಿ ಎಂದು ಹೇಳುತ್ತಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.



ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ವೈಜ್ಞಾನಿಕ ಯುಗಕ್ಕೆ ಹಾರುವ ಭರದಲ್ಲಿ ಭಾರತೀಯ ಮೂಲ ಚಿಂತನೆಗಳನ್ನು ನಾವಿಂದು ಮರೆಯುತ್ತಿದ್ದೇವೆ. ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳು ನಮ್ಮ ಜೀವನದ ಆಧಾರ. ಇವುಗಳನ್ನು ಉಳಿಸಿಕೊಂಡು ಸಮಾಜದ ನಡುವೆ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದ ಡೀನ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಶ್ರೀಪತಿ ಕಲ್ಲೂರಾಯ, ಬೆಂಗಳೂರಿನ ಗಮ್ಯ ಫೌಂಡೇಶನ್ನ ಅಧ್ಯಕ್ಷ ಗೌತಮ್ಜೀ, ಬೆಂಗಳೂರಿನ ನೆಪ್ರೋ ಸಂಸ್ಥೆಯ ಸಹಾಯಕ ಉಪನ್ಯಾಸಕಿ ಡಾ. ಲೀಲಾವತಿ, ಉಡುಪಿ ಹೆಣ್ಮಕ್ಕಳ ಸರಕಾರಿ ಪದವಿಪೂರ್ವ ವಿದ್ಯಾಲಯದ ಸಹಾಯಕ ಉಪನ್ಯಾಸಕ ಲಕ್ಷ್ಮೀಕಾಂತ್ ಕಾಪು,ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಎನ್, ಪ್ರೌಡಶಾಲಾ ಮುಖ್ಯ ಶಿಕ್ಷಕಿ ವಸಂತಿಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೌಮ್ಯ ಪಿ. ಮಾತಾಜಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 10ನೇ ತರಗತಿಯ ವಿದ್ಯಾರ್ಥಿಗಳು 9ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪ ಪ್ರದಾನ ಮಾಡಿ ತಮ್ಮ ಕೊಡುಗೆಯನ್ನು ಶಾಲೆಗೆ ಸರ್ಮಪಿಸಿದರು. ಅತಿಥಿಗಳು ವಿದ್ಯಾರ್ಥಿಗಳಿಗೆ ತಿಲಕಧಾರಣೆ ಮಾಡಿ ಆಶೀರ್ವದಿಸಿದರು. ಶಿಕ್ಷಕಿ ಶಾಂಭವಿ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು. 9ನೇ ತರಗತಿ ವಿದ್ಯಾರ್ಥಿನಿ ಶಿವಾನಿ ಕಾರ್ಯಕ್ರಮ ನಿರೂಪಿಸಿದರು.












