ಚಿತ್ರ: ದಿನೇಶ್ ಶೆಟ್ಟಿ ಕೊಟ್ಟಿಂಜ


ಶ್ರೀ ರಾಜರಾಜೇಶ್ವರಿ ದೇವಿಯು ದುಷ್ಟ ಸಂಹಾರಕ್ಕಾಗಿ ಘೋರರೂಪದ ಮಹಾಘೋರದೇವಿಯಾಗಿ ಮೂಡಿ ಬಂದು ದುಷ್ಟರ ಸಂಹಾರ ಮಾಡಿ ಭಕ್ತರ ಸಂರಕ್ಷಣೆ ಮಾಡುವ ಮಹಾತಾಯಿಯಾಗಿ ನೆಲೆಗೊಂಡಿರುವುದಾಗಿ ಪುರಾಣಗಳಲ್ಲಿ ತಿಳಿದುಬರುತ್ತದೆ.
ಪೊಳಲಿಯಿಂದ ದಕ್ಷಿಣದಲ್ಲಿರುವ ಶ್ರೀ ಕ್ಷೇತ್ರ ಅರ್ಕುಳದಲ್ಲಿ ಮಹಾಘೋರದೇವಿಯು ಭಕ್ತರನ್ನು ಮಕ್ಕಳಂತೆ ಪೊರೆಯುವ ಮಾತೃಸ್ವರೂಪಿ ಮಕರಂತಾಯಿ/ ಮಗೃಂತಾಯಿ ನಾಮಾಂಕಿತದೊಂದಿಗೆ ದುಷ್ಟ ನಿಗ್ರಹ, ಶಿಷ್ಟ ಸಂರಕ್ಷಣೆಗಾಗಿ ಧರ್ಮದೇವತೆಯಾಗಿ ಶಂಕಚಕ್ರ ಖಡ್ಗಧಾರಿಣಿಯಾಗಿ ಭಕ್ತರಿಗೆ ಅಭೀಷ್ಟಪ್ರದಾಯಿನಿಯಾಗಿ ನೆಲೆನಿಂತಿರುವುದಾಗಿ ಪ್ರತೀತಿ.
ಧರ್ಮಸಂಸ್ಥಾಪನೆಗಾಗಿ ಧರೆಗಿಳಿದ ಉಳ್ಳಾಕ್ಲು ಧರ್ಮದೇವತೆಗಳು ಮಗೃಂತಯಿಯ ಕಾರಣಿಕ ಹಾಗೂ ಅರ್ಕುಳ ಬೀಡಿನ ನಾಯಕರ ಧರ್ಮನಿಷ್ಠೆಗೆ ಒಲಿದು ಅರ್ಕುಳದಲ್ಲಿ ನೆಲೆನಿಂತರೆಂದು ಪಾಡ್ದನಗಳಿಂದ ತಿಳಿದುಬರುತ್ತದೆ.
ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಶ್ರೀ ಕ್ಷೇತ್ರ ಅರ್ಕುಳದ ಧರ್ಮದೇವತೆಗಳಿಗೂ ಅವಿನಾಭಾವ ಸಂಬಂಧ. ಈ ಹಿನ್ನೆಲೆಯಲ್ಲಿ ಪೊಳಲಿಯ ಶ್ರೀ ರಾಜರಾಜೇಶ್ವರಿ ಸನ್ನಿಧಾನದಲ್ಲಿ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ದ್ವಜಾವರೋಹಣದ ದಿನ ರಾತ್ರಿ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ನೇಮವು ಹಲವು ಶತಮಾನಗಳಿಂದ ನಡೆಯುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ. ಆದರೆ ಕಾರಣಾಂತರಗಳಿಂದ ಸುಮಾರು ಏಳೆಂಟು ದಶಕಗಳಿಂದ ಈ ಸೇವೆಯು ನಡೆಯುತ್ತಿಲ್ಲ.
ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪುನರ್ನಿರ್ಮಾಣದ ಆಶಯದ ಹಿನ್ನೆಲೆಯಲ್ಲಿ ಶ್ರೀ ಪೊಳಲಿ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಸಿದಾಗ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಮಾಡ ಹಾಗೂ ಸಾಣವನ್ನು ಪುನರ್ನವೀಕರಣ ಮಾಡಿ ವರ್ಷಾವಧಿ ಜಾತ್ರೆಯ ಸಮಯದಲ್ಲಿ ಪೂರ್ವಕಟ್ಟುಕಟ್ಟಳೆಗೆ ಅನುಸಾರವಾಗಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ಶ್ರೀ ಕ್ಷೇತ್ರ ಪೊಳಲಿಗೆ ಆಗಮಿಸಿ ಮೆಚ್ಚಿ ಸೇವೆ ನಡೆಯಲೇ ಬೇಕೆಂದು ತಿಳಿದುಬಂದಿದೆ.
ಪ್ರಶ್ನಾಚಿಂತನೆಯಲ್ಲಿ ತಿಳಿದುಬಂದಂತೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ವಾಸ್ತುಶಿಲ್ಪಗಳಿಗೆ ಅನುಗುಣವಾಗಿ ಹಾಗೂ ಶಾಸ್ತ್ರೋಕ್ತವಾಗಿ ಸುಂದರವಾದ ಮಾಡ ಹಾಗೂ ಸಾಣವನ್ನು ಪುನರ್ನವೀಕರಣ ಮಾಡಿ ಮೆಚ್ಚಿ ಸೇವೆಯ ವ್ಯವಸ್ಥೆಯನ್ನು ಮಾಡಿರುತ್ತಾರೆ.
ಆ ಪ್ರಯುಕ್ತ ಈ ವರ್ಷ ಅರ್ಕುಳ ಬೀಡಿನಿಂದ ಶ್ರೀ ಕ್ಷೇತ್ರ ಪೊಳಲಿಗೆ ಎರಡು ಬಾರಿ, ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯ ಪುಣ್ಯವಸರದಲ್ಲಿ ಭಂಡಾರ ಹೋಗಿ ನೇಮ ಸೇವೆಯು ಸಂಪನ್ನಗೊಂಡಿದೆ. ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವವುಳ್ಳ ಮತ್ತು ತುಳುನಾಡಿನಲ್ಲಿಯೇ ಅತೀ ದೀರ್ಘವಾದ ಪರಂಪರಾನುಗತ ಶೋಭಾಯಾತ್ರೆಯು ಧಾರ್ಮಿಕತೆಯ ಸೊಗಡಿನೊಂದಿಗೆ ಜನಮಾನಸದಲ್ಲಿ ಶ್ರದ್ಧಾಭಕ್ತಿಯ ದಿವ್ಯ ಸಂಚಲನವನ್ನು ಮೂಡಿಸಿದೆ.
ಮಾ.8ನೇ ಶುಕ್ರವಾರ ಪ್ರಾತಕಾಲ 6.30ಕ್ಕೆ ಅರ್ಕುಳ ಬೀಡಿನಿಂದ ಹೊರಟ ಶೋಭಾಯಾತ್ರೆ ಮೇರಮಜಲು(7.30), ಕುಟ್ಟಿಕಳ(8.15) ತೇವುಕಾಡು(8.45) ಮಹಮ್ಮಾಯಿ ಕಟ್ಟೆ(9.15), ಅಮ್ಮುಂಜೆ(10.30), ಬಡಕಬೈಲು(11) ಪುಂಚಮೆ(11.15) ಮಾರ್ಗವಾಗಿ 11.30 ಕ್ಕೆ ಶ್ರೀ ಕ್ಷೇತ್ರ ಪೊಳಲಿ ತಲುಪಲಿದೆ.
ಮಾ.13ನೇ ಬುಧವಾರ, ಬ್ರಹ್ಮಕಲಶಾಭಿಷೇಕದಂದು ರಾತ್ರಿ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ನೇಮ ಸೇವೆಯು ಸಂಪನ್ನಗೊಳ್ಳಲಿದೆ.
ಮಾ.14ನೇ ಗುರುವಾರ ಮಹಾಸಂಪ್ರೋಕ್ಷಣೆಯ ನಂತರ ಅಪರಾಹ್ನ 3 ಗಂಟೆಗೆ ಭಂಡಾರವು ಪೊಳಲಿಯಿಂದ ಹೊರಟುಬ॒ಡಕಬೈಲು(3.30), ಧನುಪೂಜೆ(4), ಕ॒ಲ್ಪನೆ(4.30), ನೆತ್ರೆಕೆರೆ(5) ಕಡೆಗೋಳಿ (5.30) ಫರಂಗಿಪೇಟೆ ಮಾರ್ಗವಾಗಿ ಸಂಜೆ 6 ಗಂಟೆಗೆ ಅರ್ಕುಳ ಬೀಡು ತಲುಪಲಿದೆ.