ವಿಟ್ಲ: ಪುಣಚ ಗ್ರಾಮದ ಕೃಷ್ಣಗಿರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎ. ೬ ರಂದು ಕೃಷ್ಣಗಿರಿ ಗೆಳೆಯರ ಬಳಗದ ಸಹಯೋಗದಲ್ಲಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ, ಗೆಳೆಯರ ಬಳಗದ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಶಸ್ತಿ ಪುರಸ್ಕೃತ ರಂಗ ನಟ ರಾಜೇಂದ್ರ ರೈ ಮಾತನಾಡಿ ಅವಕಾಶ ಸಿಕ್ಕಿದಾಗ ಪ್ರತಿಯೊಬ್ಬರೂ ಸಹ ತಮ್ಮೊಳಗಿನ ಪ್ರತಿಭೆಗಳನ್ನು ಪ್ರಕಾಶಿಸಲು ಪ್ರಯತ್ನಿಸಬೇಕು. ಯುವಕರ ಸಂಘಟನೆಗಳು ಊರಿನ ಶೈಕ್ಷಣಿಕ, ಸಾಮಾಜಿಕ ಬದಲಾವಣೆಯತ್ತ ಕ್ರಿಯಾಶೀಲವಾಗಬೇಕೆಂದು ತಿಳಿಸಿದರು.
ಕೃಷ್ಣಗಿರಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಮಾತನಾಡಿ ಊರಿನ ಸರಕಾರಿ ಶಾಲೆಗಳ ಉಳಿವು, ಬೆಳವಣಿಗೆ ವಿದ್ಯಾಭಿಮಾನಿಗಳ ಕೈಯಲ್ಲಿದೆ. ಸರಕಾರಿ ಶಾಲೆಗಳ ಬಗ್ಗೆ ತಾತ್ಸಾರ, ನಿರ್ಲಕ್ಷ್ಯ ಮನೋಭಾವನೆ ಬಂದರೆ ಶಾಲೆ ಮುಚ್ಚಬಹುದಾದ ಪರಿಸ್ಥಿತಿ ಒದಗಿ ಬರಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯ ಗುಣಮಟ್ಟದ ಶಿಕ್ಷಣದೊಂದಿಗೆ ಸರ್ವಾಂಗೀಣ ಶ್ರೇಯೋಭಿವೃದ್ಧಿಗಾಗಿ ಸರಕಾರಿ ಶಾಲೆಗಳಲ್ಲಿ ನಾನಾ ಕಾರ್ಯಯೋಜನೆಗಳಿವೆ ಎಂದು ತಿಳಿಸಿದರು.
ಸಭೆಯನ್ನು ಕನ್ನಡ ಚಲನ ಚಿತ್ರ ನಟ ಮಂಜುನಾಥ್ ಉದ್ಘಾಟಿಸಿದರು. ನಟಿ ಪ್ರಮೋದಿನಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಪ್ಪ ನಾಯ್ಕ ಉಪಸ್ಥಿತರಿದ್ದರು.
ಕೃಷ್ಣಗಿರಿ ಗೆಳೆಯರ ಬಳಗದ ಅಧ್ಯಕ್ಷ ರಾಜೇಶ್ ಗೌಡ ನಿಡ್ಯಾಳ ಗೆಳೆಯರ ಬಳಗದ ಕಾರ್ಯ ಚಟುವಟಿಕೆಗಳ ವರದಿ ವಾಚಿಸಿದರು. ಗೌರವ ಶಿಕ್ಷಕಿ ಸಂಧ್ಯಾ ಶಾಲಾ ವರದಿ ವಾಚಿಸಿದರು.
ಜಯಶ್ರೀ ಬೈಲುಪದವು ಪ್ರಾರ್ಥಿಸಿದರು. ಕೃಷ್ಣಗಿರಿ ಗೆಳೆಯರ ಬಳಗದ ಸಂಚಾಲಕ ಜಯಪ್ರಕಾಶ್ ಪುತ್ತೂರು ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಅನಿಲ್ ರೈ ವಂದಿಸಿದರು. ಗೌರವ ಶಿಕ್ಷಕಿ ಗೌತಮಿ ನಾನಾ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪತ್ರಕರ್ತ ವಿಷ್ಣುಗುಪ್ತ ಪುಣಚ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಶಾಲೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬರೆಂಜ ಮತ್ತು ಕುರುಡಕಟ್ಟೆ ಅಂಗನವಾಡಿ ಮಕ್ಕಳಿಂದ, ಶಾಲಾ ವಿದ್ಯಾರ್ಥಿಗಳಿಂದ, ಹಳೆ ವಿದ್ಯಾರ್ಥಿಗಳಿಂದ ನಾನಾ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆದವು. ರಾತ್ರಿ ಕೃಷ್ಣಗಿರಿ ಕಲಾತಂಡದ ಸದಸ್ಯರಿಂದ ’ಕಾರ್ನಿಕದ ಸ್ವಾಮಿ ಕೊರಗಜ್ಜೆ’ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
