Saturday, June 28, 2025

ಸರಪಾಡಿ: ರೈತರ ಮೂಲಭೂತ ಸೌಕರ್ಯಕ್ಕೆ ಆಗ್ರಹ

ಬಂಟ್ವಾಳ: ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೆರ್ಲ-ಬೀಯಪಾದೆ-ಸರಪಾಡಿ-ಅಜಿಲಮೊಗರು ರಸ್ತೆ ಅಭಿವೃದ್ಧಿ ಮತ್ತು ರೈತರ ಮೂಲಭೂತ ಸೌಕರ್ಯ ಕುರಿತು ಮಣಿನಾಲ್ಕೂರು, ಸರಪಾಡಿ ರೈತ ಹಿತ ರಕ್ಷಣಾ ಸಂಘದ ವತಿಯಿಂದ ಜಿಲ್ಲಾಧಿಕಾರಿ ಅವರಿಗೆ ನೀಡಿದ ಮನವಿ ಮೇರೆಗೆ ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಅವರು ಗುರುವಾರ ಸರಪಾಡಿಗೆ ಭೇಟಿ ನೀಡಿ ಸಮಾಲೋಚನ ಸಭೆ ನಡೆಸಿದರು.
ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವಠಾರದಲ್ಲಿ ಸಮಾಲೋಚನ ಸಭೆ ನಡೆಯಿತು.
ರೈತ ಹಿತ ರಕ್ಷಣಾ ಸಂಘದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅವರು ಮಾತನಾಡಿ, ಜೀವನದಿ ನೇತ್ರಾವತಿಯನ್ನು ಮಣಿನಾಲ್ಕೂರು, ಸರಪಾಡಿ ಗ್ರಾಮಸ್ಥರು ಅವಲಂಬಿಸಿದ್ದು, ಎ.ಎಂ.ಆರ್ ಪವರ್ ಪ್ರಾಜೆಕ್ಟ್ ಕಂಪನಿಯಿಂದ ಶಂಭೂರುನಲ್ಲಿ ನಿರ್ಮಿಸಲಾದ ಅಣೆಕಟ್ಟು, ಎಂಆರ್‌ಪಿಎಲ್ ಪವರ್ ಪ್ರಾಜೆಕ್ಟ್, ಎಸ್‌ಇಝಡ್ ಕಂಪನಿಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಂಪನಿಗಳು ನೇತ್ರಾವತಿಯನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದ್ದಾರೆ. ಆದರೆ ಈ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಈ ಬಗ್ಗೆ ಕಂಪನಿಗಳ ಅಧಿಕಾರಿಗಳಲ್ಲಿ ಮನವಿ ಸಲ್ಲಿಸಿದರೂ ಕಡೆಗಣಿಸಲಾಗಿದೆ. ಸಂಸದ, ಬಂಟ್ವಾಳ ಶಾಸಕ, ಜಿಲ್ಲಾಧಿಕಾರಿ, ವಿಭಾಗಾಧಿಕಾರಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದುದರಿಂದ ಸಾರ್ವಜನಿಕರೊಂದಿಗೆ ಕಂಪನಿ ಅಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಸಮಕ್ಷಮ ಸಮಾಲೋಚನ ಸಭೆ ನಡೆಸಬೇಕೇಂದು ಹೇಳಿದರು.

ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೂಪಾಡಿಕಟ್ಟೆ-ಪೆರ್ಲ-ಬೀಯಪಾದೆ-ಸರಪಾಡಿ-ಅಜಿಲಮೊಗರು ರಸ್ತೆ ವ್ಯಾಪಾರ-ವಹಿವಾಟುಗಳಿಗಾಗಿ   ಹಿಂದೆ ಉಪ್ಪಿನಂಗಡಿ ಸಂಪರ್ಕದ ಬಂಡಿ ರಸ್ತೆ ಎಂದು ಹೆಸರು ಗಳಿಸಿತ್ತು. ಈ ರಸ್ತೆಯನ್ನು ಅಗಲೀಕರಣಗೊಳಿಸಿ ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಬೇಕು. ಈ ರಸ್ತೆಯಲ್ಲಿ ಸರಕಾರಿ ಬಸ್ ಸಂಚರಿಸುವಂತಾಗಬೇಕು. ನದಿಬದಿ ರಸ್ತೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಹೇಳಿದರು.

ಎಎಂಆರ್ ಅಣೆಕಟ್ಟಿನಿಂದಾಗಿ ಮಳೆಗಾಲದಲ್ಲಿ ಹೆಚ್ಚುವರಿ ನೀರು ನದಿಬದಿಯ ರೈತರ ಕೃಷಿ ನಾಶಕ್ಕೆ ಕಾರಣವಾಗುತ್ತದೆ. ಆದರೆ ಕಂಪನಿ ಈ ರೈತರನ್ನು ಸಂತ್ರಸ್ತರೆಂದು ಗುರುತಿಸದೆ ಯಾವುದೇ ಪರಿಹಾರ ನೀಡುವುದಿಲ್ಲ. ಈ ರೈತರ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರು ಮಾತನಾಡಿ, ಈಗಾಗಲೇ ಇಲ್ಲಿನ ರೈತರ ಸಮಸ್ಯೆಯನ್ನು ಪರಿಶೀಲಿಸಲಾಗಿದೆ. ಈ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ರಸ್ತೆ ಅಭಿವೃದ್ಧಿ, ರೈತರ ಮೂಲಭೂತ ಸೌಕರ್ಯಗಳ ಬಗ್ಗೆ ನಿರ್ದೇಶನ ನೀಡಲಾಗುವುದು. ಮುಂದಿನ ೧೫ದಿನಗಳ ಕಾಲಾವಕಾಶದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಯುವಕ ಮಂಡಲ ಸರಪಾಡಿ ಮತ್ತು ರೈತ ಹಿತ ರಕ್ಷಣಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ರೈತ ಹಿತ ರಕ್ಷಣಾ ಸಂಘದ ಕಾರ್ಯದರ್ಶಿ ಶಿವಪ್ಪ ಪೂಜಾರಿ ಹಟ್ಟತಡ್ಕ, ಪ್ರಮುಖರಾದ ಆದಂ ಕುಂಞ, ರಾಧಾಕೃಷ್ಣ ರೈ, ರಿಚಾರ್ಡ್ ಡಿಸೋಜ, ಜಯಚಂದ್ರ ಆಚಾರ್ಯ, ಯೋಗೀಶ್ ಶೆಟ್ಟಿ ಪಡ್ಡಾಯಿಮಜಲು, ಸತೀಶ್ ಪೈ, ಆನಂದ ಶೆಟ್ಟಿ ಆರುಮುಡಿ, ಸುರೇಂದ್ರ ಪೈ, ಮಾರ್ಷಲ್ ಗೊನ್ಸಾಲ್ವಿಸ್, ಕಂದಾಯ ನಿರೀಕ್ಷಕ ನವೀನ್, ಗ್ರಾಮಕರಣಿಕ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸಹಾಯಕ ಕಮಿಷನರ್ ಅವರು ಪೆರ್ಲ-ಬೀಯಪಾದೆ ರಸ್ತೆ, ನದಿಯ ತಡೆಗೋಡೆಗಳನ್ನು ವೀಕ್ಷಣೆ ನಡೆಸಿದರು.

More from the blog

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...