ವಿಟ್ಲ: ಸಮಾಜಕ್ಕೆ ಉತ್ತಮ ಕೊಡುಗೆಯಾಗಬೇಕೆಂಬ ತಾಯಿಯವರ ನಿತ್ಯ ಪ್ರಾರ್ಥನೆ, ಉತ್ಕಟ ಇಚ್ಛೆ ನನ್ನ ಬದುಕಿನ ದಿಕ್ಕನ್ನು ಬದಲಾಯಿಸಿತು. ತಾಯಿ ಆರೋಗ್ಯದಲ್ಲಿ ಆದ ಪವಾಡದಿಂದ ದೇವಿಯ ಆರಾಧನೆಯತ್ತ ಹೋಗುವ ಹಾಗಾಯಿತು. ಮುಂದಿನ ದಿನಗಳಲ್ಲಿ ತಾಯಿಯ ಹೆಸರಲ್ಲಿ ಟ್ರಸ್ಟ್ ರಚಿಸಿ ಸಮಾಜ ಸೇವೆಯ ಕಾರ್ಯ ನಡೆಸಲಾಗುವುದು. ಬದುಕಿನಲ್ಲಿ ಉಪಕಾರ ಸ್ಮರಣೆ ಬಹಳಷ್ಟು ಮುಖ್ಯ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾಣಿಲ ಶ್ರೀಧಾಮ ಸಭಾಭವನದಲ್ಲಿ ದೈವಾಧೀನರಾದ ಕಮಲಮ್ಮನವರ ಸಂತಾಪ ಸಭೆಯಲ್ಲಿ ಮಾತನಾಡಿದರು. ಯಾರಿಗೂ ತೊಂದರೆಯಾಗುವ ರೀತಿಯಲ್ಲಿ ಬದುಕು ನಡೆಸಬಾರದು ಎಂದು ಹೇಳುತ್ತಿದ್ದ ಮಾತೃಶ್ರೀಗಳು ಬಾಲ್ಯದಿಂದಲೇ ಸಂಸ್ಕಾರ ನೀಡುವ ಕಾರ್ಯ ಮಾಡಿದ್ದಾರೆ. ಅಬಲೆಯರು ಹಾಗೂ ವಿಕಲಚೇತನರಿಗೆ ಸಹಾಯ ಮಾಡುವ ಕಾರ್ಯವನ್ನು ತಾಯಿಯ ಹೆಸರಿನಲ್ಲಿ ಮುಂದೆ ಮಾಡಲಾಗುವುದು. ತಾಯಿಯವರ ಹೃದಯ ಶ್ರೀಮಂತಿಕೆ ಇಷ್ಟೂ ಜನ ಇಲ್ಲಿ ಸೇರುವಂತೆ ಮಾಡಿದೆ ಎಂದು ತಿಳಿಸಿದರು.
ಕಮಲ ಅಮ್ಮನವರ ಹಿರಿಯ ಪುತ್ರ ಉದ್ಯಮಿ ಚಂದ್ರಶೇಖರ ಮೂಲ್ಯ ಮಾತನಾಡಿ ತಾಯಿ ಜತೆ ಕಾಲ ಕಳೆಯಲು ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಜತೆ ಇದ್ದೆವು. ಪ್ರತಿಯೊಬ್ಬರಿಗೆ ತಿಳಿಸಲು ಸಾಧ್ಯವಾಗಿಲ್ಲವಾದರೂ, ಎಲ್ಲರೂ ಆಗಮಿಸಿರುವುದು ಸಂತೋಷವನ್ನು ತಂದಿದೆ. ಸೆ.೧೦ಕ್ಕೆ ಶ್ರೀಧಾಮದಲ್ಲಿ ನಡೆಯುವ ತಾಯಿಯವರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.
ಪುತ್ರ ಹರಿಶ್ಚಂದ್ರ ಮೂಲ್ಯ ಹಾಜರಿದ್ದರು. ಕಮಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ಟ್ರಸ್ಟಿಗಳಾದ ತಾರಾನಾಥ ಕೊಟ್ಟಾರಿ, ಜಯರಾಜ್, ಮಚ್ಛೇಂದ್ರನಾಥ ಸಾಲ್ಯಾನ್, ಸಾಮಾಜಿಕ ಕಾರ್ಯಕರ್ತ ಕೆಯ್ಯೂರು ನಾರಾಯಣ ಭಟ್, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ರಾಜೇಂದ್ರನಾಥ ರೈ ಪೆರುವಾಯಿ, ಪುರುಷೋತ್ತಮ ಕಲ್ಬಾವಿ, ಮಹಿಳಾ ಸಮಿತಿಯ ವನಿತಾ ವಿ. ಶೆಟ್ಟಿ, ಕಾರ್ಯದರ್ಶಿ ಗೀತಾ ಪುರುಷೋತ್ತಮ ಸೇರಿ ಕ್ಷೇತ್ರದ ಭಕ್ತಾದಿಗಳು ನುಡಿ ನಮನ ಸಲ್ಲಿಸಿದರು.
ಕ್ಷೇತ್ರದ ಟ್ರಸ್ಟಿ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.














