ವಿಟ್ಲ: ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮಕ್ಕಳ ಲೋಕ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಸಂಯುಕ್ತ ಆಶ್ರಯದಲ್ಲಿ ಜ.12 ರಂದು ನಡೆಯಲಿರುವ ಬಂಟ್ವಾಳ ತಾಲೂಕು 14ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ವೀಕ್ಷಿತ ಅವರು ಆಯ್ಕೆಯಾಗಿದ್ದಾಳೆ.
ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಓಣಿಬಾಗಿಲು ಬಾಲಕೃಷ್ಣ ಪುರುಷ ಮತ್ತು ಬೇಬಿ ದಂಪತಿಗಳ ಪುತ್ರಿಯಾಗಿರುವ ಈಕೆ ಒಂದನೇ ತರಗತಿಯಿಂದಲೇ ಎಲ್ಲಾ ಸ್ಪರ್ಧೆಗಳಲ್ಲಿಯೂ ಶಿಕ್ಷಕರ ಮಾರ್ಗದರ್ಶನದಂತೆ ಭಾಗವಹಿಸುವ ಆಸಕ್ತಿ ಹೊಂದಿದ್ದಳು. ಮೂರನೇ ತರಗತಿಯಲ್ಲಿರುವಾಗಲೇ ಶಾಲಾ ಶಿಕ್ಷಕರ ಪ್ರೋತ್ಸಾಹದಂತೆ ಯಕ್ಷಗಾನ ಅಭ್ಯಾಸ ನಡೆಸಿದ್ದಾಳೆ. ಪೆರ್ಲದ ಪಡ್ರೆ ಚಂದ್ರು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿನ ಗುರುಗಳಾದ ಸಬ್ಬಣಕೋಡಿ ರಾಮ್ ಭಟ್ಟರವರಲ್ಲಿ ಕಲಿಯುತ್ತಿದ್ದಳು.
ಪಾಠ, ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು ಕ್ಲಸ್ಟರ್, ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದಳು. 2017ರಲ್ಲಿ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಧ್ಯಮ ಶಾಲೆಯಲ್ಲಿ ನಡೆದ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಯಕ್ಷಗಾನದಲ್ಲಿ ಭಾಗವಹಿಸಿ ಉತ್ತಮ ಸ್ತ್ರೀ ವೇಷ ಪ್ರಶಸ್ತಿಯನ್ನು ಪಡೆದಿದ್ದಾಳೆ. ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ಇದರ ಕಲಾ ಪರ್ವದಂದು ನಡೆದ ಯಕ್ಷಗಾನದಲ್ಲಿ ಅಭಿನಯಿಸಿ ಪ್ರಶಸ್ತಿ ಗಳಿಸಿರುತ್ತಾಳೆ. ಹಾಗೆಯೇ 2018ರ ನವಂಬರ್ 15, ರಂದು ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿಸಿರಿ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿ, ಎಲ್ಲರಿಂದಲೂ ಪ್ರಶಂಸೆ ಗಳಿಸಿದ್ದಳು. ಈ ಮಧ್ಯೆ ಉತ್ತಮ ಸಾಹಿತ್ಯಾಸಕ್ತಿಯನ್ನೂ ಹೊಂದಿದ್ದಾಳೆ.
