ವಿಟ್ಲ: ಉಕ್ಕುಡ ಬದ್ರಿಯಾ ಜುಮಾ ಮಸೀದಿ ಅಧೀನದ ನೂರುಲ್ ಹುದಾ ಮದ್ರಸದ ವಿದ್ಯಾರ್ಥಿಗಳು ರೇಂಜ್ ಮಟ್ಟದ ಪಬ್ಲಿಕ್ ಪರೀಕ್ಷೆಯಲ್ಲಿ ಸಾಧನೆಗೈದ ಹಿನ್ನೆಲೆಯಲ್ಲಿ ಮಸೀದಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಲಾಯಿತು.
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ೨೦೧೯ನೇ ಸಾಲಿನ ೫ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ಮೊದಲ ನಾಲ್ಕು ಸ್ಥಾನಗಳನ್ನು ಉಕ್ಕುಡ ಮದ್ರಸ ಪಡೆದಿದೆ. ವಿದ್ಯಾರ್ಥಿ ಅಬ್ದುಲ್ಲಾ ರಿಶಾನ್ ಉಕ್ಕುಡ ಪ್ರಥಮ, ಮುಹಮ್ಮದ್ ರಮೀಝ್ ದರ್ಬೆ ದ್ವಿತೀಯ, ಫಾತಿಮತ್ ಅಸ್ರೀನಾ ಆಲಂಗಾರು ತೃತೀಯ ಹಾಗೂ ಹಿಬಾ ಫಾತಿಮಾ ಉಕ್ಕುಡ ನಾಲ್ಕನೇ ಸ್ಥಾನ ಪಡೆಯುವ ಮೂಲಕ ರೇಂಜ್ ಮಟ್ಟದಲ್ಲಿ ಸಾಧನೆಗೈದಿದ್ದಾರೆ.
ಉಕ್ಕುಡ ಜುಮಾ ಮಸೀದಿ ಮುದರ್ರಿಸ್ ಹಾಫಿಝ್ ಅಹ್ಮದ್ ಶರೀಫ್ ಸಖಾಫಿ ಅವರು ಪ್ರತಿಭಾನ್ವಿತರನ್ನು ಸ್ಮರಣಿಕೆ ನೀಡಿ ಅಭಿನಂದಿಸಿದರು. ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ನೆಕ್ಕರೆಕಾಡು, ಕಾರ್ಯದರ್ಶಿ ಶರೀಫ್ ತೈಬಾ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ರಶೀದ್ ವಿಟ್ಲ, ಮದ್ರಸ ಮುಖ್ಯ ಶಿಕ್ಷಕರಾದ ಹಸನ್ ಸಅದಿ ಕುಕ್ಕಿಲ, ಮದ್ರಸ ಅಧ್ಯಾಪಕರಾದ ಅಬ್ದುಲ್ ಹಮೀದ್ ಮದನಿ ಕಾನತ್ತಡ್ಕ, ಕುತುಬಿಯತ್ ಕಮಿಟಿ ಅಧ್ಯಕ್ಷ ಅಬೂಬಕರ್ ಮೆಹರಾಜ್, ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಹಮೀದ್ ಟಿ.ಎಚ್.ಎಂ.ಎ. ಮೊದಲಾದವರು ಉಪಸ್ಥಿತರಿದ್ದರು.
