ವಿಟ್ಲ: ಜನರಿಗೆ ನೆಮ್ಮದಿಯ ಜೀವನ ನಡೆಸುವ ಸಲುವಾಗಿ ಗ್ರಾಮ ಪಂಚಾಯಿತಿ ಜನರ ಮನೆಯಾಗಿ ರೂಪುಗೊಳ್ಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅಧಿಕಾರ ಪಡೆಯುವ ಅವಕಾಶ ಸಂವಿಧಾನ ಕಲ್ಪಿಸಿದೆ ಎಂದು ವಿರೋಧ ಪಕ್ಷದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಗುರುವಾರ ಸಾಲೆತ್ತೂರು ಗ್ರಾಮ ಪಂಚಾಯಿತಿನ ನೂತನ ಕಚೇರಿ ಕಟ್ಟಡ ಹಾಗೂ ನೂತನ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಕಚೇರಿ ಉದ್ಘಾಟಿಸಿ ಮಾತನಾಡಿದರು. ಗ್ರಾ.ಪಂ ನ ತೀರ್ಮಾನ ಅಂತಿಮವಾಗಿದೆ. ಗ್ರಾ.ಪಂ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿದಾಗ ಜನರ ಬೇಡಿಕೆಗಳು ಈಡೇರಿಕೆಯಾಗುತ್ತದೆ. ಜನಪ್ರತಿನಿಧಿಗಳಿಂದ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳು ನಡೆಯಬೇಕು ಎಂದು ಹೇಳಿದರು.
ಸಭಾಭವನ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಜನಪ್ರತಿನಿಧಿಗಳಿಗೆ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ಜವಾಬ್ದಾರಿ ಇರುತ್ತದೆ. ಅವುಗಳನ್ನು ಈಡೇರಿಸಿಕೊಂಡು ಮುಂದೆ ಹೋಗಬೇಕು. ಎಲ್ಲರೂ ಸಮಾನರು ಎಂದು ತಿಳಿದುಕೊಂಡಾಗ ಯಾವುದೇ ಸಮಸ್ಯೆಗಳು ಬರುವುದಿಲ್ಲ. ನಾನು ರಾಜ್ಯಧರ್ಮವನ್ನು ಪಾಲಿಸಿಕೊಂಡು ಹೋಗುತ್ತಿದ್ದೇನೆ. ಕ್ಷೇತ್ರದಲ್ಲಿ ಶಾಂತಿಯಿಂದ ಜನರು ಬದುಕಿದಾಗ ಕ್ಷೇತ್ರದ ಅಭಿವೃದ್ಧಿಯಾದಂತೆ ಎಂದ ಅವರು ಸಾಲೆತ್ತೂರು ಪಂಚಾಯಿತಿಗೆ ಶೀನಿವಾಸ ಪೂಜಾರಿ ಹಾಗೂ ನಾನು ಜತೆಯಾಗಿ ೫ ಲಕ್ಷ ರೂ. ಅನುದಾನ ನೀಡುತ್ತೇವೆ ಹಾಗೂ ನನ್ನ ವತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ದ್ವಿಚಕ್ರ ವಾಹನ ಕೊಡುಗೆಯಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಾಲೆತ್ತೂರು ಗ್ರಾಮ ಪಂಚಾಯಿತಿನ ಪ್ರಭಾರ ಪಿಡಿಒ ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೆರ, ಉಪಾಧ್ಯಕ್ಷ ಬಿ.ಎಂ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ಎಂ.ಎಸ್ ಮಹಮ್ಮದ್, ಬಂಟ್ವಾಳ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ ಬಂಗೇರ, ತಾಲೂಕು ಪಂಚಾಯಿತಿ ಸದಸ್ಯ ಕುಳ್ಯಾರು ನಾರಾಯಣ ರೈ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಾಲೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷೆ ಕಮಲ, ಗೋಳ್ತಮಜಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್ ಮುಸ್ತಫಾ, ತಾಲೂಕು ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರೋಹಿದಾಸ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರಭಾರ ಪಿಡಿಒ ಇಸ್ಮಾಯಿಲ್ ವಂದಿಸಿದರು. ಶಿಕ್ಷಕ ಗೋಪಾಲಕೃಷ್ಣ ನಿರೂಪಿಸಿದರು.
ಪೋಟೊ-೩ವಿಟಿಎಲ್-ಸಾಲೆತ್ತೂರು-

