ದೆಹಲಿ: ತಾನು ನಿಧನರಾಗಿರುವುದಾಗಿ ಟ್ವೀಟ್ ಹಾಗೂ ಸುದ್ದಿ ಪ್ರಸಾರ ಮಾಡಿರುವವರ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕಿ, ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ನನ್ನ ಮರಣವನ್ನು ಘೋಷಿಸಲು ಅವರಿಗೆ ಅಷ್ಟೊಂದು ತುರ್ತು ಏನಿತ್ತು ಎಂದು ಪ್ರಶ್ನಿಸಿದ್ದಾರೆ.


ಸುಮಿತ್ರಾ ಮಹಾಜನ್ ನಿಧನರಾಗಿದ್ದಾರೆ ಎಂದು ಗುರುವಾರ ರಾತ್ರಿ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟ್ ಮಾಡಿದ್ದರು. ಅಲ್ಲದೆ ಕೆಲವು ಸುದ್ದಿ ಸಂಸ್ಥೆಗಳು ಕೂಡಾ ಸುಮಿತ್ರಾ ಮಹಾಜನ್ ನಿಧನರಾಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿತ್ತು. ಆದರೆ ಕೆಲವೇ ಕ್ಷಣಗಳ ಬಳಿಕ ಬಿಜೆಪಿ ನಾಯಕರು ಸುಮಿತ್ರಾ ಮಹಾಜನ್ ಅವರ ಅರೋಗ್ಯ ಉತ್ತಮವಾಗಿದೆ ಎಂದು ಹೇಳಿ ಟ್ವೀಟ್ ಮಾಡಿದ್ದರು.
ಇಂದೋರ್ ಜಿಲ್ಲಾಡಳಿತದೊಂದಿಗೆ ಖಚಿತಪಡಿಸದೆ ನನ್ನ ನಿಧನದ ಬಗ್ಗೆ ಸುದ್ದಿ ವಾಹಿನಿಗಳು ಹೇಗೆ ವರದಿ ಮಾಡಲು ಸಾಧ್ಯ? ಯಾವುದೇ ದೃಢೀಕರಣವಿಲ್ಲದೆ ನನ್ನ ಮರಣವನ್ನು ಘೋಷಿಸುವ ತುರ್ತು ಏನು? ಎಂದು ಪ್ರಶ್ನಿಸಿರುವ ಸುಮಿತ್ರಾ ಮಹಾಜನ್, ಶಶಿ ತರೂರ್ ಅವರ ಟ್ವಿಟ್ ಬಗ್ಗೆಯೂ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗಮನಿಸಬೇಕು ಎಂದಿದ್ದಾರೆ.












