ಬಂಟ್ವಾಳ: ಧಾರ್ಮಿಕ ಕೇಂದ್ರಗಳ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೇರೆ ಬೇರೆ ರೀತಿಯ ದಾಳಿಗಳು ಕೊನೆಯಾಗಬೇಕು, ಮತ್ತು ಜನಜಾಗೃತಿ ಗಾಗಿ ಜನಾಂದೋಲನವಾಗಬೇಕು ಎಂಬ ನಿಟ್ಟಿನಲ್ಲಿ ವಿಶಿಷ್ಟ ರೀತಿಯ ಹೋರಾಟದ ಪ್ರಾರಂಭಿಕ ಹಂತವಾಗಿ ಕಾರಿಂಜ ರಥಬೀದಿಯಲ್ಲಿ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಹಲವು ಸಂಘಟನೆಗಳ ಸಹಕಾರದೊಂದಿಗೆ ನ. 21ರಂದು ಸಂಜೆ 3.3೦ಕ್ಕೆ “ರುದ್ರಗಿರಿಯ ರಣಕಹಳೆ “ ಬೃಹತ್ ಜನಜಾಗೃತಿ ಸಭೆಯನ್ನು ಹಮ್ಮಿಕೊಂಡಿದೆ ಎಂದು ಹಿಂಜಾವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ತಿಳಿಸಿದರು.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕಾರಿಂಜ ದೇವಸ್ಥಾನದ ಅಸ್ತಿತ್ವಕ್ಕೆ ತೊಂದರೆಯಾಗುರುತ್ತಿರುವ ಗಣಿಗಾರಿಕೆಯ ವಿರುದ್ಧ ಜನಜಾಗೃತಿ ಮೂಡಿಸಿ ಕ್ಷೇತ್ರದ ಸಂರಕ್ಷಣೆಗಾಗಿ ಕಾರಿಂಜ ರಥಬೀದಿಯಲ್ಲಿ ರುದ್ರಗಿರಿಯ ರಣಕಹಳೆ ಬೃಹತ್ ಜನಜಾಗೃತಿ ಸಭೆ ನಡೆಯಲಿದೆ ಎಂದು ಅವರು ಹೇಳಿದರು.
ಸುಮಾರು 6 ಕಿ.ಮೀ. ಪ್ರದೇಶದಲ್ಲಿ ವ್ಯಾಪಿಸಿರುವ ಈ ಶಿವನ ಬೆಟ್ಟ ಕೋಟ್ಯಂತರ ಖನಿಜ ಸಂಪತ್ತಿನ ಉಗ್ರಾಣ. ಆದರೆ ಈ ಅಮೂಲ್ಯ ಸಂಪತ್ತಿನ ಮೇಲೆ ಪ್ರಕೃತಿ ಭಂಜಕ ಸ್ವಾರ್ಥಿಗಳ ಕ್ರೂರ ದೃಷ್ಟಿ ಬಿದ್ದು, ಈಗಾಗಲೇ ನೂರಾರು ಕೋ.ರೂ.ಗಳ ಸಂಪತ್ತನ್ನು ಲೂಟಿ ಮಾಡಲಾಗಿದೆ.
ಇದರ ವಿರುದ್ಧ ಅಧಿಕಾರಿಗಳಿಗೆ ನೀಡಿದ ದೂರಿನ ಪ್ರತಿಗಳು ಕಸದ ಬುಟ್ಟಿ ಸೇರಿದೆ. ಹೀಗಾಗಿ ಅಕ್ರಮ ಗಣಿಗಾರಿಕೆಯ ವಿರುದ್ಧ ಸಂಘಟಿತ ಹೋರಾಟ ನಡೆಸುವ ಸಲುವಾಗಿ ನಮ್ಮ ಸಂಘಟನೆಯು ಈ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸುಮಾರು 5 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಜನಜಾಗೃತಿಯ ಸಭೆಗೆ ಪೂರ್ವಭಾವಿಯಾಗಿ ವಗ್ಗ ಕೇಂದ್ರ ಸ್ಥಾನದಿಂದ ಕಾರಿಂಜ ಕ್ಷೇತ್ರಕ್ಕೆ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಬಳಿಕ ಪದ್ಮನಾಭ ಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತದೆ. ಹಿಂಜಾವೇ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂಜಾವೇ ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ಬಂಟ್ವಾಳ ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಪ್ರಮುಖರಾದ ಪ್ರಶಾಂತ್ ಕೆಂಪುಗುಡ್ಡೆ, ಬಾಲಕೃಷ್ಣ ಕಲಾಯಿ ಉಪಸ್ಥಿತರಿದ್ದರು.


