ಪುತ್ತೂರು : ಸಾರಿಗೆ ನಿಯಮಗಳ ಉಲ್ಲಂಘನೆಯಿಂದಾಗಿ ಭಾರತದಲ್ಲಿ ಅತೀ ಹೆಚ್ಚು ಅಪಘಾತಗಳು ನಡೆಯುತ್ತಿದ್ದು, ಈ ಕುರಿತಾಗಿ ಯುವ ಸಮೂಹ ಜಾಗೃತರಾಗಬೇಕಿದೆ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ರೊ.ಆನಂದ ಗೌಡ ಹೇಳಿದರು.


ರೋಟರಿ ಪುತ್ತೂರು ಸ್ವರ್ಣ, ರೋಟರಿ ಪುತ್ತೂರು ಸೆಂಟ್ರಲ್ ಹಾಗೂ ರೋಟರಿ ಪುತ್ತೂರು ಎಲೈಟ್ ನ ಆಶ್ರಯದಲ್ಲಿ ಗುರುವಾರ ಅಶ್ಮಿ ಕಂಫರ್ಟ್ಸ್ ನಲ್ಲಿ ನಡೆದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪಘಾತದ ಅಂಕಿ ಅಂಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಇದು ವಿಷಾದನೀಯ ಸಂಗತಿ ಎಂದ ಅವರು, ಪ್ರತಿಯೊಬ್ಬರ ಜಾಗೃತಿಯಿಂದ ಇದರ ನಿಯಂತ್ರಣ ಸಾಧ್ಯ ಎಂದರು.
ಆಗಾಗ್ಗೆ ಬದಲಾಗುತ್ತಿರುವ ಸಾರಿಗೆ ನಿಯಮಗಳ ಕುರಿತಾಗಿ ಪ್ರತಿಯೊಬ್ಬರೂ ಅರಿವು ಪಡೆಯುವುದರ ಜೊತೆಗೆ,
ಅವುಗಳನ್ನು ಪಾಲಿಸಬೇಕು ಎಂದ ಅವರು, ವಾಹನ ಚಲಾಯಿಸುವ ಹಿರಿಯರು ತಾವು ನಿಯಮಗಳನ್ನು ಪಾಲಿಸುವುದರ ಜೊತೆಗೆ, ಮುಂದಿನ ಪೀಳಿಗೆಗೂ ಮಾದರಿಯಾಗಬೇಕು ಎಂದರು.
ಇದೇ ಸಂದರ್ಭ ರೋಟರಿ ಪುತ್ತೂರು ಎಲೈಟ್ ವತಿಯಿಂದ ಮೌನೇಶ ವಿಶ್ವಕರ್ಮ ರಚನೆಯ, ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿನಿ ಆ್ಯನೆಟ್ ರಿಯಾರಾಮ್ ಹಾಡಿರುವ ರಸ್ತೆ ಸುರಕ್ಷತಾ ಜಾಗೃತಿ ಗೀತೆಯನ್ನು ಆರ್ ಟಿಓ ಆನಂದ ಗೌಡರು ಬಿಡುಗಡೆಗೊಳಿಸಿದರು.
ರೋಟರಿ ವಲಯ 5 ರ ಸಹಾಯಕ ಗವರ್ನರ್ ರೊ.ಸಚ್ಚಿದಾನಂದ.ಡಿಯವರು, ರೋಟರಿ ಸ್ವರ್ಣದ ನಿಯೋಜಿತ ಅಧ್ಯಕ್ಷ ರೊ.ಭಾಸ್ಕರ ಕೋಡಿಂಬಾಳ ರಿಗೆ ಪಿಹೆಚ್ಎಫ್ ಪದವಿ ಪ್ರದಾನ ಮಾಡಿ ಮಾತನಾಡಿ, ರಸ್ತೆ ಸುರಕ್ಷತೆ ಕುರಿತಾಗಿ ರೋಟರಿ ಎಲೈಟ್ ಬಿಡುಗಡೆಗೊಳಿಸಿದ ಜಾಗೃತಿ ಗೀತೆಯ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಝೋನಲ್ ಲೆಫ್ಟಿನೆಂಟ್ ರೊ.ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ರೊ.ವೆಂಕಟರಾಜ್ ಸ್ವಾಗತಿಸಿ, ರೋಟರಿ ಸ್ವರ್ಣದ ಅಧ್ಯಕ್ಷೆ ರೊ.ಸೆನೋರಿಟಾ ಆನಂದ್ ವಂದಿಸಿದರು.ರೋಟರಿ ಎಲೈಟ್ ನ ರೊ.ಈಶ್ವರ್ ಬೆಡೇಕರ್ ಕಾರ್ಯಕ್ರಮ ನಿರ್ವಹಿಸಿದರು.












