ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ, ಮಹಿಳಾ ಜಾಗೃತಿ ವೇದಿಕೆ ಹಾಗೂ ರೆಡ್ಕ್ರಾಸ್ ಘಟಕಗಳ ಆಶ್ರಯದಲ್ಲಿ ಆರೋಗ್ಯಪರ ಲಿಂಗಸೂಕ್ಷ್ಮತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ.ನಿಖಿತ, ವೈದ್ಯಾಧಿಕಾರಿಗಳು ಇವರು ವಿದ್ಯಾರ್ಥಿನಿಯರ ಹದಿಹರೆಯದ ಹಾಗೂ ವಯಸ್ಕ ಸಮಸ್ಯೆಗಳನ್ನು ಕುರಿತು ಮಾಹಿತಿ ನೀಡಿದರು. ಹದಿಹರೆಯ ಹಾಗೂ ವಯಸ್ಕರಲ್ಲಿ ಆಗುವ ದೈಹಿಕ, ಮಾನಸಿಕ ಹಾಗೂ ಭೌದ್ಧಿಕ ಬದಲಾವಣೆಗಳು ಸಾಮಾನ್ಯವಾಗಿದ್ದು ಮಾನವನ ಜೀವನ ಚಕ್ರದ ಸಹಜತೆಯನ್ನು ಸೂಚಿಸುತ್ತದೆ. ಈ ಸಮಸ್ಯೆಗಳನ್ನು ಆತ್ಮವಿಶ್ವಾಸ ಹಾಗೂ ಹಿರಿಯರ ಮಾರ್ಗದರ್ಶನದಿಂದ ಪರಿಹರಿಸಿಕೊಳ್ಳುವಂತೆ ಕಿವಿಮಾತು ತಿಳಿಸಿದರು.
ಡಾ.ದೀಪಕ್ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿ ಇವರು ವಿದ್ಯಾರ್ಥಿಗಳಲ್ಲಿ ಎದುರಾಗುವ ವಯೋಸಹಜ ಸಮಸ್ಯೆಗಳು, ತಲ್ಲಣಗಳು ಹಾಗೂ ಖಿನ್ನತೆಗಳ ಕಾರಣಗಳನ್ನು ಹಾಗೂ ಅವುಗಳನ್ನು ಮೆಟ್ಟಿನಿಲ್ಲುವ ಮಾರ್ಗಗಳನ್ನು ಸೂಚಿಸಿದರು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಗಳಲ್ಲಿ ವೈದ್ಯಾಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್ ಇವರು ಮಾತನಾಡಿ ವಿಭಕ್ತ ಕುಟುಂಬಗಳಿಂದ ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ವಯೋಸಹಜ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಿಗೆ ಸ್ಪಂದಿಸಲು ವಿಫಲರಾಗುತ್ತಿದ್ದಾರೆ. ಹಿರಿಯರ ಮಾರ್ಗದರ್ಶನ ಸಿಗದೆ ದುರಾಭ್ಯಾಸಗಳಿಗೆ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಕಾರ್ಯಕ್ರಮವು ಸಮಯೋಚಿತವಾಗಿದ್ದು ವಿದ್ಯಾರ್ಥಿಗಳಿಗೆ ಫಲಪ್ರದವಾಗಿದೆ ಎಂದರು.
ಈ ಕಾರ್ಯಕ್ರಮವನ್ನು ಮಹಿಳಾ ಜಾಗೃತಿ ವೇದಿಕೆಯ ಸಂಚಾಲಕರಾದ ಸೌಮ್ಯ ಹೆಚ್.ಕೆ ಹಾಗೂ ರೆಡ್ಕ್ರಾಸ್ ಘಟಕದ ಸಂಚಾಲಕರಾದ ದೇವಿಪ್ರಸಾದ್ ಇವರು ಆಯೋಜಿಸಿದ್ದರು.
ಜ್ಞಾನೇಶ್ವರಿ ತೃತೀಯ ಬಿಕಾಂ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಸ್ವಾತಿ ತೃತೀಯ ಬಿಎ ಕಾರ್ಯಕ್ರಮವನ್ನು ನಿರೂಪಿಸಿದರು, ಕಾವ್ಯ ತೃತೀಯ ಬಿಕಾಂ ಸ್ವಾಗತಿಸಿದರೆ, ಕೃತಿಕಾ ತೃತೀಯ ಬಿಎ ಸರ್ವರಿಗೂ ವಂದಿಸಿದರು.
