ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವತಿಯಿಂದ ನಗರೋತ್ಥಾನ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಟ್ಲದ ಅಡ್ಡದಬೀದಿ-ಬಾಕಿಮಾರ್ ಬೈಪಾಸ್ ರಸ್ತೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಬುಧವಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಗ್ರಾಮದ ಅಭಿವೃದ್ಧಿಯಾಗಲು ಗ್ರಾಮದ ಜನರ ಸಹಕಾರ ಅಗತ್ಯ. ಸಹಕಾರ ಇಲ್ಲದಿದ್ದರೆ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಒಂದು ನಗರ ಅಭಿವೃದ್ಧಿ ಹೊಂದಲು ವಿವಿಧ ಯೋಜನೆಗಳ ಮೂಲಕ ಅನುದಾನ ಅಗತ್ಯವಾಗಿದೆ. ಅದೀಗ ನಡೆಯುತ್ತಿದೆ. ವಿಟ್ಲದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ನಗರೋತ್ಥಾನ ಯೋಜನೆಯಲ್ಲಿ ಬೈಪಾಸ್ ರಸ್ತೆ ನಿರ್ಮಾಣಗೊಂಡಿದೆ. ಚರಂಡಿ, ಪಾರ್ಕಿಂಗ್ ವ್ಯವಸ್ಥೆಗಳು, ರಸ್ತೆಗಳು ನಗರ ಅಗತ್ಯವಾಗಿ ಬೇಕಾಗಿದೆ. ವಿಟ್ಲದ ವಾಹನ ದಟ್ಟಣೆ ನಿಯಂತ್ರಿಸಲು ಈ ಒಂದು ರಸ್ತೆಯಿಂದ ಸಾಧ್ಯವಿಲ್ಲ. ಇದೇ ರೀತಿಯಾಗಿ ಇನ್ನಷ್ಟು ರಸ್ತೆ ನಿರ್ಮಾಣಗೊಂಡ ಮಾತ್ರ ಸಾಧ್ಯವಾಗಿದೆ ಎಂದು ತಿಳಿಸಿದರು.
ಬಳಿಕ ಪಟ್ಟಣ ಪಂಚಾಯಿತಿನಲ್ಲಿ ಎಸ್ಎಫ್ಸಿ ೭.೨೫ರಲ್ಲಿ ಕಾಯ್ದಿರಿಸಿದ ಹಣದಲ್ಲಿ ೬೫ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಕಚ್ಚಾ ಮನೆ ರಿಪೇರಿಗೆ ೪೧ ಮಂದಿಗೆ ಚೆಕ್ ವಿತರಿಸಲಾಯಿತು.
ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ ವಿಟ್ಲ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ, ಸದಸ್ಯರಾದ ರಾಮ್ದಾಸ್ ಶೆಣೈ, ಲೋಕನಾಥ ಶೆಟ್ಟಿ ಕೊಲ್ಯ, ಉಷಾ ಕೃಷ್ಣಪ್ಪ, ಮಂಜುನಾಥ ಕಲ್ಲಕಟ್ಟ, ಶ್ರೀಕೃಷ್ಣ, ಬಿಜೆಪಿ ನಗರ ಅಧ್ಯಕ್ಷ ಮೋಹನದಾಸ ಉಕ್ಕುಡ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಕಾಮಗಾರಿ ಗುತ್ತಿಗೆ ವಹಿಸಿದ ಮುಗೆರೋಡಿ ಕನ್ಸ್ಟ್ರಕ್ಷನ್ ಸಂಸ್ಥೆಯ ಎಂಜಿನಿಯರ್ ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.
