ಬಂಟ್ವಾಳ : ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಕ ಸಾಂಕ್ರಾಮಿಕ ಕೊರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಂತೆ , ಇತ್ತೀಚೆಗೆ ವಿದೇಶದಿಂದ ಊರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ನಾಳ ದೇವಸ್ಥಾನದ ಹತ್ತಿರ ವಾಸವಿರುವ ವ್ಯಕ್ತಿಯೋರ್ವರಿಗೆ ಹೋಂ ಕ್ವಾರೆಂಟೈನ್ ನ ನಿಗಾದಲ್ಲಿ ಇರುವಂತೆ ಸೂಚಿಸಲಾಗಿತ್ತು. ಈ ಬಗ್ಗೆ Quarentine ನಿಗಾದಲ್ಲಿರುವ ವ್ಯಕ್ತಿಗಳನ್ನು ಪರಿಶೀಲನೆಗೆಂದು ಬೆಳ್ತಂಗಡಿ ಪೊಲೀಸು ಠಾಣಾ ಸಿಬ್ಬಂದಿಗಳಾದ ಗಂಗಾದರ್ , ಚೈತ್ರ ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಎಎನ್ಎಂ ಕಮಲ ಎಂಬವರು ತೆರಳಿದ್ದರು. ಆದರೆ ಈ ವೇಳೆ ಹೋಂ ಕ್ವಾರಂಟೈನ್ ನಲ್ಲಿರಬೇಕಾದ ವ್ಯಕ್ತಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಮನೆಯ ಅಂಗಳದಲ್ಲಿ ಮುಖಕ್ಕೆ ಮಾಸ್ಕ್ ಹಾಕದೇ ಓಡಾಡುತ್ತಿದ್ದು ಈತನಿಗೆ ಸುರಕ್ಷತಾ ಕ್ರಮವನ್ನು ಪಾಲಿಸುವಂತೆ ತಿಳಿಸಿದಾಗ ಆತನ ಮನೆಯಲ್ಲಿದ್ದ ಮಸೂದ್ ಆಲಿ, ಬಾತೀಷ್ ಆಲಿ, ಅಕ್ಬರ್ ಅಲಿ ಎಂಬವರು ಅಪಾಯಕಾರಿ ರೋಗದ ಸೋಂಕನ್ನು ಹರಡುವ ಸಂಭವ ಇರುವ ಕೃತ್ಯವನ್ನು ನಿರ್ಲಕ್ಷ್ಯದಿಂದ ಹಾಗೂ ದ್ವೇಷಪೂರ್ವಕವಾಗಿ ಮಾಡಿ ನಮ್ಮ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಬ್ಬಂದಿ ಗಂಗಾಧರ ರವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 31/ 2020 ಕಲಂ 269, 270, 353 504 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

